Publish Date: Fri, 03 Oct 2025 (16:20 IST)
Updated Date: Fri, 03 Oct 2025 (16:25 IST)
ಬೆಂಗಳೂರು: ದೇವೇಗೌಡ, ಕುಮಾರಸ್ವಾಮಿ ಕುಟುಂಬ ನನ್ನನ್ನು ಜೈಲಿಗೆ ಕಳುಹಿಸಲು ಕಾಯ್ತಿದ್ದಾರೆಂಬ ಡಿಸಿಎಂ ಡಿಕೆ ಶಿವಕುಮಾರ್ ಆರೋಪಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಗರಂ ಆಗಿದ್ದಾರೆ.
ಈ ಸಂಬಂಧ ಜೆಪಿ ಭವದನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ತಿಂಗಳ ನಮ್ಮ ಮನೆ ಮುಂದೆ ಹಗಲು ರಾತ್ರಿ ಮಾಧ್ಯಮದವರು ನಿಂತಿದ್ದರು. ಯಾರ ಪ್ರೇರಣೆಯಿಂದ ಇದೆಲ್ಲ ಆಯ್ತು ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆಯೇ ಕಿಡಿಕಾರಿದರು.
ದಯಮಾಡಿ ಬೇರೊಬ್ಬರ ಹೆಸರು ತೆಗೆದು ಚರ್ಚೆ ಮಾಡೋದು ಬೇಡ. ನಾನು ಆ ವಿಷಯದಲ್ಲಿ ಮಾತಾಡುವುದಿಲ್ಲ. ನಾನು ಆಪಾದನೆ ಮಾಡಲ್ಲ. ಆವತ್ತು ನಾನು ಮಾತಾಡಿಲ್ಲ. ಇವತ್ತು ಮಾತಾಡಲ್ಲ. ಆ ದಿನಗಳನ್ನು ನೀವೇ ನೋಡಿದ್ದೀರಿ, ಅದರ ಹಿಂದಿನ ಶಕ್ತಿ ಏನು ಅಂತ ನಿಮಗೆ ಗೊತ್ತಿದೆ ಎಂದರು.
ಯಾರು ಏನೇ ಹೇಳಿದ್ರು, ನಾವು ಸಣ್ಣ ರಾಜಕೀಯ ಪಕ್ಷದಿಂದ ಬಂದವರು. ಅದನ್ನ ಉಳಿಸಿಕೊಳ್ಳೋಕೆ ಶಕ್ತಿ ಮೀರಿ ಕೆಲಸ ಮಾಡ್ತೀವಿ. ಡಿಕೆ ಶಿವಕುಮಾರ್ ಬಗ್ಗೆ ನಾನು ಮಾತಾಡಲ್ಲ. 20 ವರ್ಷದ ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗಿನಿಂದ ನಾನು ಮಾತಾಡಿಲ್ಲ ಎಂದು ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್ಶಿಪ್ ಮಾಡೋಕೆ ಡಿಕೆಶಿವಕುಮಾರ್ ಮುಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿಯಲ್ಲಿ ನಮ್ಮ ಪಕ್ಷದವರು ಇದರ ವಿರುದ್ಧ ಪ್ರತಿಭಟನೆ ಮಾಡಿದರು. ನಾನು ನೋಡಿದೆ.
ಈಗ ಅವರ ಸರ್ಕಾರ ಇದೆ. ಅವರು ಏನೇ ಹೇಳಿದರೂ ತಿರಸ್ಕಾರ ಮನೋಭಾವದಿಂದ ನೋಡಿ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು. ಅಲ್ಲಿವರೆಗೂ ನೀವು ಕಾಯಬೇಕು.