Publish Date: Thu, 22 Jan 2026 (15:23 IST)
Updated Date: Thu, 22 Jan 2026 (15:25 IST)
ಬೆಳ್ತಂಗಡಿ: ಧನು ಪೂಜೆಗೆ ಹೋಗುವಾಗ ನಿಗೂಢವಾಗಿ ಸಾವನ್ನಪ್ಪಿದ್ದ ಬೆಳ್ತಂಗಡಿಯ ಸುಮಂತ್ ಪ್ರಕರಣ ಎಲ್ಲಿಯವರೆಗೆ ಬಂದಿದೆ? ಆರೋಪಿಗಳು ಸಿಕ್ಕಿಬಿದ್ದರಾ? ಇಲ್ಲಿದೆ ಲೇಟೆಸ್ಟ್ ಮಾಹಿತಿ.
ಸುಮಂತ್ ಪ್ರಕರಣ ನಡೆದು ವಾರವೇ ಕಳೆದಿದೆ. ಆದರೆ ಇನ್ನೂ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಲ್ಲ. ಸಂಕ್ರಾಂತಿ ಸಂದರ್ಭದಲ್ಲಿಯೇ ಬೆಳ್ಳಂ ಬೆಳಿಗ್ಗೆ ಕಾಲುದಾರಿಯಲ್ಲಿ ಮನೆ ಪಕ್ಕದ ದೇವಸ್ಥಾನಕ್ಕೆ ಹೋಗುವಾಗ ಸುಮಂತ್ ನಿಗೂಢವಾಗಿ ಸಾವನ್ನಪ್ಪಿದ್ದ.
ಆತನ ಮೃತದೇಹ ಮನೆ ಪಕ್ಕದ ಕೆರೆಯಲ್ಲಿ ಪತ್ತೆಯಾಗಿತ್ತು. ಆದರೆ ಮೈಮೇಲಿದ್ದ ಗಾಯಗಳು ಆತನದ್ದು ಕೊಲೆ ಎಂದು ಖಚಪಡಿಸಿತ್ತು. ಇದಾದ ಬಳಿಕ ಪೊಲೀಸರು ಈಗಲೂ ನಿರಂತರವಾಗಿ ತನಿಖೆ ನಡೆಸುತ್ತಲೇ ಇದ್ದಾರೆ. ಆದರೆ ಇನ್ನೂ ಆರೋಪಿಗಳು ಸಿಕ್ಕಿಲ್ಲ.
ಆದರೆ ಕಳೆದ ಒಂದು ವಾರದಿಂದಲೂ ಇಲ್ಲಿ ಪೊಲೀಸರ ತಂಡ ಮೊಕ್ಕಾಂ ಹೂಡಿ ಸುಳಿವು ಸಿಗುತ್ತದೆಯೇ ಎಂದು ಪ್ರಯತ್ನ ಪಡುತ್ತಲೇ ಇದ್ದಾರೆ. ಆದರೆ ಸುಮಂತ್ ಆಗಲೀ, ಆತನ ಕುಟುಂಬದವರಿಗಾಗಲೀ ಯಾರ ಮೇಲೂ ಶಂಕೆಯಿಲ್ಲ. ಯಾರೊಂದಿಗೂ ವೈಷಮ್ಯವೂ ಇಲ್ಲ. ಹೀಗಿರುವಾಗ ಯಾರು ಕೃತ್ಯವೆಸಗಿರಬಹುದು ಎಂಬುದೇ ಪೊಲೀಸರಿಗೆ ತಲೆನೋವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ಇದೇ ಅಡ್ಡಿಯಾಗಿದೆ. ಆದರೂ ಪೊಲೀಸರು ನಿಜವಾದ ಆರೋಪಿಗಳನ್ನು ಸೆರೆಹಿಡಿಯುತ್ತಾರೆ ಎಂಬ ವಿಶ್ವಾಸದಲ್ಲಿ ಕುಟುಂಬವರಿದ್ದಾರೆ.