Publish Date: Wed, 08 Jul 2020 (17:46 IST)
Updated Date: Wed, 08 Jul 2020 (17:48 IST)
ಡೆಡ್ಲಿ ಕೊರೊನಾ ವೈರಸ್ ಭೀತಿಯಲ್ಲಿರುವ ಈ ಊರಿನ ಮಂದಿ ಹೀಗೆ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮದಲ್ಲಿ ಕೊರೊನಾ ಸೋಂಕು ತಡೆಗೆ ಗ್ರಾಮಸ್ಥರು ಕಾವಲು ಕಾಯುವ ಪದ್ಧತಿಗೆ ಮೊರೆ ಹೋಗಿದ್ದಾರೆ.
ಕೊರೊನಾ ಸೋಂಕು ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿರ್ಲಕ್ಷ್ಯ ತೋರಿದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. ಇದನ್ನು ಮನಗಂಡ ಗ್ರಾಮದ ಹಿರಿಯರೆಲ್ಲ ಸೇರಿ ತೀರ್ಮಾನಿಸಿ ಅಗತ್ಯವಿದ್ದವರಿಗೆ ಮಾತ್ರ ಪ್ರವೇಶ ಎಂಬ ನಿಯಮ ರೂಪಿಸಿದ್ದಾರೆ.
ಗ್ರಾಮಸ್ಥ ಹಾಗೂ ರೈತ ಮುಖಂಡ ಮಾಲಾತೇಶ ಪೂಜಾರ ಮಾತನಾಡಿ, 4 ಸಾವಿರ ಜನಸಂಖ್ಯೆ ಇರುವ ಚಿನ್ನಮುಳಗುಂದ ಗ್ರಾಮಕ್ಕೆ ಅನಗತ್ಯವಾಗಿ ಪರಸ್ಥಳದ ಜನರು ಬರುವುದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮದ ಗಡಿಯನ್ನು ಕಾಯಲು 40 ಜನರನ್ನು ನೇಮಕ ಮಾಡಲಾಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ರಸ್ತೆಗಳಿವೆ. ಬೆಳಿಗ್ಗೆ 6 ಗಂಟೆಯಿಂದ 1 ಗಂಟೆಯವರೆಗೆ 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾವಲು ಕಾಯಲು ಸ್ವಯಂ ಪ್ರೇರಿತರಾಗಿ ಯುವಕರು ಮುಂದೆ ಬಂದಿದ್ದಾರೆ ಎಂದಿದ್ದಾರೆ.