Publish Date: Thu, 21 Apr 2022 (17:40 IST)
Updated Date: Thu, 21 Apr 2022 (17:43 IST)
ದೆಹಲಿಯಲ್ಲಿ ಎರಡು ಬಾರಿ ಸರಕಾರ ರಚನೆ ಮಾಡಿದೆವು. ಪಂಜಾಬ್ ನಲ್ಲಿ ಸರಕಾರ ರಚಿಸಿದೆವು. ಈಗ ಕರ್ನಾಟಕದಲ್ಲಿ ಸರಕಾರ ರಚನೆ ಮಾಡಿaಯೇ ಮಾಡುತ್ತೇವೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ರೈತ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಹಿಂದೆ 20 ಪರ್ಸೆಂಟ್ ಸರಕಾರ ಇತ್ತು. ಈಗ 40 ಪರ್ಸೆಂಟ್ ಸರಕಾರ ಇದೆ. ಆದರೆ ನಮ್ಮದು ಜಿಯೋ ಪರ್ಸೆಂಟ್ ಸರಕಾರ. ಈ ಸರಕಾರ ಬೇಕು ಅಂದರೆ ನಮಗೆ ಅವಕಾಶ ಕೊಡಿ ಎಂದರು.
ದೆಹಲಿಯಲ್ಲಿ ನಮ್ಮದು ಶೂನ್ಯ ಪರ್ಸೆಂಟ್ ಸರಕಾರ. ಇದಕ್ಕೆ ಕಾರಣ ನಮ್ಮದು ಪಕ್ಕಾ ಪ್ರಮಾಣಿಕ ಸರಕಾರ. ಇಂದು ದೆಹಲಿ ಉತ್ತಮ ಆಡಳಿತಕ್ಕೆ ಹೆಸರಾಗಿದ್ದರೆ ಅದಕ್ಕೆ ಕಾರಣ ನಮ್ಮದು ಭ್ರಷ್ಟಾಚಾರ ರಹಿತ ಸರಕಾರವಾಗಿದೆ. ಈ ಸರಕಾರ ನಿಮಗೆ ಬೇಡವೇ? ಆದ್ದರಿಂದ ಎಲ್ಲರೂ ಆಮ್ ಆದ್ಮಿ ಪಕ್ಷಕ್ಕೆ ಸೇರಿ ಪ್ರಮಾಣಿಕ ಸರಕಾರ ರಚನೆ ಮಾಡಲು ಕೈ ಜೋಡಿಸೋಣ ಎಂದು ಕೇಜ್ರಿವಾಲ್ ಕರೆ ನೀಡಿದರು.
ದೆಹಲಿಯ ಸರಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಲಾಗಿದೆ. ಶೇ.೯೯.೯೭ ಫಲಿತಾಂಶ ಬಂದಿದೆ. ದೆಹಲಿಗೆ ಬಂದು ನೋಡಿ. ಇಲ್ಲಿ ಈಜುಕೊಳ, ಲ್ಯಾಬೊರೇಟರಿ ಮುಂತಾದ ಅತ್ಯಾಧುನಿಕ ಸೌಲಭ್ಯ ನೀಡಲಾಗಿದೆ. ಇದರಿಂದ ಈ ವರ್ಷ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆ ಸೇರುತ್ತಿದ್ದಾರೆ ಎಂದು ಅವರು ವಿವರಿಸಿದರು.
ದೆಹಲಿಯಲ್ಲಿ ಉಚಿತ ವಿದ್ಯುತ್, ಉಚಿತ ಚಿಕಿತ್ಸೆ, ಉಚಿತ ನೀರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುತ್ತಿದೆ. ಇದಕ್ಕೆ ಕಾರಣ ಭ್ರಷ್ಟಾಚಾರ ರಹಿತ ಹಾಗೂ ಪ್ರಮಾಣಿಕ ಸರಕಾರ ಇರುವುದಕ್ಕೆ ಎಂದು ಅವರು ಹೇಳಿದರು.
ನನ್ನ ವಿರುದ್ಧ ಮೋದಿ ಸರಕಾರ ಸಿಬಿಐ, ಪೊಲೀಸ್, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ಎಲ್ಲರಿಂದ ದಾಳಿ ಮಾಡಿಸಿದರು. ಆದರೆ ಏನೂ ಸಿಗದೇ ಕೊನೆಗೆ ಪ್ರಮಾಣಿಕ ಮುಖ್ಯಮಂತ್ರಿ ಅಂತ ಬೆನ್ನು ತಟ್ಟಿದರು ಎಂದು ಕೇಜ್ರಿವಾಲ್ ವಿವರಿಸಿದರು.