Select Your Language

Notifications

webdunia
webdunia
webdunia
webdunia

ನಮ್ಮ ಹಿತವನ್ನು ನಾವೇ ಕಾಯ್ದುಕೊಳ್ಳಬೇಕು: ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿ

ನಮ್ಮ ಹಿತವನ್ನು ನಾವೇ ಕಾಯ್ದುಕೊಳ್ಳಬೇಕು: ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿ
ಬೆಂಗಳೂರು , ಮಂಗಳವಾರ, 23 ಆಗಸ್ಟ್ 2016 (19:51 IST)
ನಮ್ಮ ಹಿತವನ್ನು ನಾವೇ ಕಾಯ್ದುಕೊಳ್ಳಬೇಕು, ಆರೋಗ್ಯಪೂರ್ಣವಾದ ಆಹಾರವನ್ನೇ ಸ್ವೀಕರಿಸಬೇಕು, ಸುಲಭದಲ್ಲಿ ಸಿಗುತ್ತದೆ, ಕಡಿಮೆ ದರದಲ್ಲಿ ಸಿಗುತ್ತದೆ ಎಂದು ವಿಷವನ್ನು ಸೇವಿಸಲಾಗದು. ಅಮೃತವನ್ನು ಬೆಳೆಯಬೇಕು, ಅಮೃತವನ್ನೇ ಉಣ್ಣಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು.
 
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ದೇಶೀಯ ಹಸುವಿನ ಹಾಲಿನ ಶ್ರೇಷ್ಠತೆಯ ಬಗ್ಗೆ ಮಾತನಾಡಿದ ಶ್ರೀಗಳು, ದೇಶೀಯ ಹಸುವಿನ ಹಾಲಿಗೆ ರೋಗನಿರೋಧಕ ಶಕ್ತಿಯಿದೆ. ಹಾಗೆಯೇ, ಸಂಕರ ತಳಿಯ ಹಾಲಿಗೆ ದೇಹವ್ಯವಸ್ಥೆಯನ್ನು ಹಾಳುಮಾಡುವ ಶಕ್ತಿಯಿದೆ ಎಂದು ಮಾರ್ಮಿಕವಾಗಿ ಹೇಳಿದರು. 
 
ಇಂದು ಪಾಶ್ಚಾತ್ಯ ವಿಜ್ಞಾನ ಹೇಳಿದ್ದು ಮಾತ್ರ ಸತ್ಯ ಎಂಬಂತಾಗಿದೆ. ಆದರೆ, ಪಾಶ್ಚಾತ್ಯ ವಿಜ್ಞಾನವೂ ಎ2 ಪ್ರೋಟಿನ್ ಇರುವ ದೇಶಿ ಹಸುವಿನ ಹಾಲು ಶ್ರೇಷ್ಠ, ಎ1 ಪ್ರೋಟೀನ್ ಇರುವ ಸಂಕರ ತಳಿಯ ಹಾಲು ಬಳಸಲು ಯೋಗ್ಯವಲ್ಲ ಎಂದಿದೆ. ಯಾವ ದೇಶದಲ್ಲಿ ಈ ಸಂಕರ ತಳಿಗಳ ಉಗಮ ಆಯಿತೋ ಅದೇ ದೇಶದ ಅತ್ತುನ್ನತ ಸಂಶೋಧನಾ ಸಂಸ್ಥೆ ಯೂರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ಕೂಡ ಇದನ್ನು ಒಪ್ಪಿಕೊಂಡಿದೆ. ವಿಪರ್ಯಾಸ ಎಂದರೆ ನಮ್ಮ ದೇಶದಲ್ಲಿಸತ್ವಗುಣದಿಂದ ಕೂಡಿದ ಹಾಲನ್ನು ಕೊಡುವ ಗೋವುಗಳನ್ನುಕಡೆಗಣಿಸಲಾಗಿದ್ದು, ಸಂಕರತಳಿಗೆ ರಾಜಾಶ್ರಯವನ್ನು ನೀಡಿ ದೇಶೀಯ ತಳಿಯನ್ನು ಕುಲಗೆಡಿಸಲಾಗುತ್ತಿದೆ ಎಂದರು.
 
 
ಕುವೆಂಪು ಅವರು ಗೋಹತ್ಯೆಯನ್ನು ವಿರೋಧಿಸಿ ಬರೆದ ಕವಿತೆಯ ಸಾಲುಗಳನ್ನು ವಾಚಿಸಿದ ಶ್ರೀಗಳು, ಸರ್ಕಾರಗಳು ಸ್ಪಂದಿಸದಿದ್ದರೇನು, ನಾವೆಲ್ಲ ಒಟ್ಟಾಗಿ ನಮ್ಮ ಹಿತಕ್ಕಾಗಿ ಗೋವನ್ನು ಉಳಿಸಿ ಬೆಳೆಸೋಣ ಎಂಬ ಕರೆಯನ್ನು ನೀಡಿದರು.
 
ಗದಗದ ಶ್ರೀ ಗುರುಪಾದ ದೇವರು ಸಂತಸಂದೇಶ ನೀಡಿ, ಗೋವಿನ ಬಗ್ಗೆ ಕೇವಲ ಮಾತನಾಡಿದರೆ ಸಾಲದು, ಗೋಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು. ಉತ್ತರ ಕರ್ನಾಟಕದ ಭಾಗಗಳಲ್ಲಿ ಬರ ಎದುರಾದಾಗ ಶ್ರೀರಾಮಚಂದ್ರಾಪುರಮಠದ ಶ್ರೀಗಳು ಮೇವನ್ನು ಒದಗಿಸಿ ಲಕ್ಷಾಂತರ ಗೋವುಗಳನ್ನುಸಂರಕ್ಷಿಸಿದ್ದಾರೆ ಎಂದು ಸ್ಮರಿಸಿಕೊಂಡರು.
 
ಡಾ. ಕೆ. ಆರ್. ವಸಂತ ಕುಮಾರ್ ಹಾಗೂ ಮಂಡ್ಯದ ಎಲ್. ಡಿ. ನಂದೀಶ್  ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾ ಪುರಸ್ಕಾರ ಸ್ವೀಕರಿಸಿದ ಡಾ. ಕೆ. ಆರ್. ವಸಂತ ಕುಮಾರ್ ಅವರು, ವೈಜ್ಞಾನಿಕ ಸಾಧನಗಳ ಮೂಲಕ ಗೋವಿನಲ್ಲಿ ಇರುವ ಶಕ್ತಿಯನ್ನು ಸಭೆಯ ಮುಂದೆ ಪ್ರತ್ಯಕ್ಷೀಕರಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಸಂವತ್ಸರ ಸಮರ್ಪಣಾ ಸ್ತೋತ್ರ ಸಾಂದ್ರಮುದ್ರಿಕೆಯನ್ನು ರಾಘವೇಶ್ವರ ಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಶ್ರೀಗುರುಪಾದ ದೇವರು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಪರಮೇಶ್ವರ ಹೆಗಡೆ ಸಂಗಡಿಗರಿಂದ ಗಾಯನ ಕಾರ್ಯಕ್ರಮ ನಡೆಯಿತು. ಪ್ರಕಾಶ ದೇಶಪಾಂಡೆ, ಹರೀಶ ಕರ್ಣಮ್ ಸಾಥ್ ನೀಡಿದರು.
 
ಮಂಗಳೂರು ಮಂಡಲಾಂತರ್ಗತ ಬಾಯಾರು, ಕನ್ಯಾನ, ಕೋಳ್ಯೂರು ಹಾಗೂ ಮುಡಿಪು  ವಲಯದವರಿಂದ ಸರ್ವಸೇವೆ ನೆರವೆರಿತು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು. 
 
ಕೋಟ್ಸ್
ಪಾಶ್ಚಾತ್ಯ ವಿಜ್ಞಾನವೂ ಎ2 ಪ್ರೋಟಿನ್ ಇರುವ ದೇಶಿ ಹಸುವಿನ ಹಾಲು ಶ್ರೇಷ್ಠ, ಎ1 ಪ್ರೋಟೀನ್ ಇರುವ ಸಂಕರ ತಳಿಯ ಹಾಲು ಬಳಸಲು ಯೋಗ್ಯವಲ್ಲ ಎಂದಿದೆ. ಯಾವ ದೇಶದಲ್ಲಿ ಈ ಸಂಕರ ತಳಿಗಳ ಉಗಮ ಆಯಿತೋ ಅದೇ ದೇಶದ ಅತ್ತುನ್ನತ ಸಂಶೋಧನಾ ಸಂಸ್ಥೆ ಇದನ್ನು ಒಪ್ಪಿಕೊಂಡಿದೆ.
  - ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು,                                                                                         ಶ್ರೀರಾಮಚಂದ್ರಾಪುರಮಠ
 
ಗೋವಿನ ಬಗ್ಗೆ ಕೇವಲ ಮಾತನಾಡಿದರೆ ಸಾಲದು, ಗೋಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು. ಉತ್ತರ ಕರ್ನಾಟಕದ ಭಾಗಗಳಲ್ಲಿ ಬರ ಎದುರಾದಾಗ ಶ್ರೀರಾಮಚಂದ್ರಾಪುರಮಠದ ಶ್ರೀಗಳು ಮೇವನ್ನು ಒದಗಿಸಿ ಲಕ್ಷಾಂತರ ಗೋವುಗಳನ್ನುಸಂರಕ್ಷಿಸಿದ್ದಾರೆ.
                                                                                      - ಶ್ರೀ ಗುರುಪಾದ ದೇವರು, ಗದಗ
 
ಇಂದಿನ ಕಾರ್ಯಕ್ರಮ (24.08.2016):
 
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00: ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 : 
ಗೋಸಂದೇಶ : ಕುಮಾರ್ ಜಹಗೀರದಾರ, ಬೆಂಗಳೂರು
ಲೋಕಾರ್ಪಣೆ : ವಿಚಾರವಿಹಾರ 3 : ಪುಸ್ತಕ : 
       ಸಾಧನಾಪಂಚಕ ಪ್ರವಚನಮಾಲಿಕೆ - ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು - ಕುಮಾರ್ ಜಹಗೀರದಾರ, ಬೆಂಗಳೂರು 
 
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಶ್ರೀಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ - ಭಜನೆ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ಹೇಳಿಕೆಗೆ ಆಶ್ಚರ್ಯ ಬೇಡ, ಅದು ಕಾಂಗ್ರೆಸ್ ಸಂಸ್ಕೃತಿ: ಬಿಜೆಪಿ