Select Your Language

Notifications

webdunia
webdunia
webdunia
webdunia

ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ: ಡಿ.ಕೆ. ಸುರೇಶ್

ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ: ಡಿ.ಕೆ. ಸುರೇಶ್
bengaluru , ಗುರುವಾರ, 26 ಮೇ 2022 (22:03 IST)
ಬಿಜೆಪಿ ಸರ್ಕಾರದ ಒಳಸಂಚು, ಷಡ್ಯಂತ್ರವನ್ನು ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನವರು ಸಮರ್ಥವಾಗಿ ಎದುರಿಸಲಿದ್ದಾರೆ. ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ( ಇ.ಡಿ.) ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ವಿಚಾರವಾಗಿ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಯಾವುದೇ ಕಾರಣಕ್ಕೂ ಅವರಿಗೆ ಹೆದರುವುದಿಲ್ಲ, ಶರಣಾಗುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಸುದೀರ್ಘವಾಗಿ ತನಿಖೆ ನಡೆಯುತ್ತಲೇ ಇದೆ. ಇನ್ನೂ ನಡೆಯಲಿ. ಅದನ್ನು ಎದುರಿಸಲು ನಾವು ಮಾನಸಿಕವಾಗಿ, ದೈಹಿಕವಾಗಿ ಸಮರ್ಥವಾಗಿದ್ದೇವೆ ಎಂದರು.
ಮೋದಿ ಅವರು ಪ್ರಧಾನ ಮಂತ್ರಿಯಾದ ಕಳೆದ ಎಂಟು ವರ್ಷಗಳಲ್ಲಿ, ವಿರೋಧ ಪಕ್ಷಗಳ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ. ತಮ್ಮ ವಿರೋಧಿಗಳು, ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವವರನ್ನು ಯಾವ ರೀತಿ ಹತ್ತಿಕ್ಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಕೂಡ ಅದರ ಭಾಗ. ಆರೋಪಪಟ್ಟಿಯಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ಬಿಟ್ಟು ಬೇರೇನೂ ಇಲ್ಲ.
ವಿಧಾನಸಭೆಯಲ್ಲಿ ಹಣ ವರ್ಗಾವಣೆ ವಿಚಾರ ಪ್ರಸ್ತಾಪವಾಗಿದೆ. ಶಾಸಕರ ಖರೀದಿ ಪ್ರಕರಣ ನಡೆದಿದೆ  ಆದರೂ ಬಿಜೆಪಿಯವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿದೆ ಎಂದಿದ್ದಾರೆ. ಆದರೂ ಈ ಬಗ್ಗೆ ತನಿಖೆ ಇಲ್ಲ. ಇದೆಲ್ಲವೂ ನಿಮಗೆ ತಿಳಿದಿದೆ. ಈ ವಿಚಾರವಾಗಿ ಸಿಬಿಐ, ಇಡಿ ಯಾಕೆ ಪಾರದರ್ಶಕವಾಗಿ ತನಿಖೆ ಮಾಡಿಲ್ಲ. ಅವರದೇ ಶಾಸಕರು ಹೇಳುತ್ತಿದ್ದಾರೆ. ಪಂಜಾಬ್ ಸರ್ಕಾರದಲ್ಲಿ ಮಂತ್ರಿಯೊಬ್ಬರು 1 ಪರ್ಸೆಂಟ್ ಕಮಿಷನ್ ಪಡೆದಿದ್ದಕ್ಕೆ ಅವರನ್ನು ವಜಾಗೊಳಿಸಿ ತನಿಖೆ ಮಾಡುತ್ತಿದ್ದಾರೆ. ಅಂತಹ ಧೈರ್ಯವನ್ನು ಈ ಬಿಜೆಪಿ ಸರ್ಕಾರ ಯಾಕೆ ಮಾಡುತ್ತಿಲ್ಲ? ಎಂದು ಪ್ರಶ್ನೆಸಿದರು.
ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸೈನಿಕನಾಗಿ, ಕಾರ್ಯಕರ್ತನಾಗಿ ಮಾಡಬೇಕಾದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರದವರು ಕೇಸ್ ಆದರೂ ಹಾಕಲಿ, ಜೈಲಿಗಾದರೂ ಹಾಕಲಿ, ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಮುಕ್ತ ಮನಸಿನಿಂದ ಇದ್ದೇವೆ. ನಾವು ಯಾವುದನ್ನೂ ಮುಚ್ಚಿಕೊಳ್ಳುವ ಅಗತ್ಯವಿಲ್ಲ. ಕಾನೂನು ಹಾಗೂ ನ್ಯಾಯಾಲಯದ ಚೌಕಟ್ಟಿನಲ್ಲಿ ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ’ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ತಪ್ಪು ಮಾಡಿಲ್ಲ; ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ: ಡಿ.ಕೆ. ಶಿವಕುಮಾರ್