Publish Date: Thu, 26 Feb 2026 (10:03 IST)
Updated Date: Thu, 26 Feb 2026 (10:16 IST)
ಬೆಂಗಳೂರು: ಸರ್ಕಾರೀ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕನ್ನಡದಲ್ಲಿ ಬಿಟ್ಟು ಉರ್ದುವಿನಲ್ಲಿ ಪ್ರಕಟಿಸಿದ್ದಕ್ಕೆ ರಾಜ್ಯ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಹಿಂದಿ ಹೇರಿಕೆ ಅಂತೀರಿ, ಉರ್ದು ಓಕೆನಾ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯೇತರ ರಾಜ್ಯಗಳು ಹಿಂದಿ ಹೇರಿಕೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿತ್ತು. ಈ ಕೂಗಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡಾ ಬೆಂಬಲಿಸುತ್ತಲೇ ಬಂದಿದೆ. ಆದರೆ ಈಗ ಸರ್ಕಾರೀ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕನ್ನಡ ಬಿಟ್ಟು ಉರ್ದುವಿನಲ್ಲಿ ಪ್ರಕಟಿಸಿದ್ದು ಜನರ ಪ್ರಶ್ನೆಗೆ ಗುರಿಯಾಗಿದೆ.
ಕನ್ನಡ ರಾಜ್ಯದ ಭಾಷೆ. ಹಾಗಿರುವಾಗ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸರ್ಕಾರೀ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಪ್ರಕಟಿಸುವ ಅಗತ್ಯವೇನಿದೆ ಎಂದಿದ್ದಾರೆ. ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ಘಟಕ ಪ್ರತಿಕ್ರಿಯಿಸಿದ್ದು ಓಲೈಕೆ ರಾಜಕೀಯಕ್ಕೆ ಕನ್ನಡವನ್ನೇ ಕಡೆಗಣಿಸಲಾಗುತ್ತಿದೆ ಎಂದಿದ್ದಾರೆ.
ಓಲೈಕೆ ರಾಜಕಾರಣಕ್ಕಾಗಿ ಕನ್ನಡವನ್ನು ಸಹ ಕಡೆಗಣಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ. ರೋಗ ನಿರೋಧಕ ಚಿಕಿತ್ಸೆ - ಆಂಬುಲೆನ್ಸ್ಗೆ ಚಾಲನೆ ನೀಡಬೇಕಾಗಿದ್ದ ಆಹ್ವಾನ ಪತ್ರಿಕೆಯನ್ನು ಸಂಪೂರ್ಣ ಉರ್ದುವಿನಲ್ಲಿ ಪ್ರಕಟಿಸಿದೆ. ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಕರ್ನಾಟಕದ ಆಡಳಿತ ಭಾಷೆ ಕನ್ನಡವೋ ಅಥವಾ ಉರ್ದುವೋ..?? ಉರ್ದು ಸಹ ಒಂದು ಭಾಷೆ ಎಂದು ತೇಪೆ ಹಚ್ಚಿರುವ ನಾಡದ್ರೋಹಿ ಅನಾರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ನಿಮ್ಮ ಮನೆಯಲ್ಲಿ ನೀವು ಉರ್ದು ಮಾತನಾಡುತ್ತೀರಿ ಎಂಬ ಕಾರಣಕ್ಕೆ ಸರ್ಕಾರದ ಅಧಿಕೃತ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ ಪ್ರಕಟಿಸಲು ನಿಮಗೆ ಅಧಿಕಾರ ಕೊಟ್ಟವರಾರು ಎಂದು ಪ್ರಶ್ನೆ ಮಾಡಿದೆ.