Publish Date: Tue, 03 Jul 2018 (17:54 IST)
Updated Date: Tue, 03 Jul 2018 (18:01 IST)
ಶಾಲೆಗಳು ಆರಂಭವಾಗಿ ತಿಂಗಳು ಕಳೆದ್ರೂ ಕೂಡಾ ಶಾಲಾ ಮಕ್ಕಳಿಗೆ ಸಮವಸ್ತ್ರ ಸಿಗುತ್ತಿಲ್ಲ. ಹಾಗಂತ ಸರಕಾರ ಇದಕ್ಕೆ ಅನುದಾನ ಕೊಟ್ಟಿಲ್ಲಾ ಅಂತಾನೂ ಅಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸರ್ಕಾರಿ ಶಾಲೆಗಳಿಗೆ ಸರ್ಕಾರಾನೇ ಕೊಟ್ಟಿರೋ ಸಮವಸ್ತ್ರಗಳನ್ನ ವಿತರಣೆ ಮಾಡೋಕೆ ಸರ್ಕಾರಿ ಅಧಿಕಾರಿಗಳೇ ಹಿಂದೇಟು ಹಾಕ್ತಿದ್ದಾರೆ.
ಇಚ್ಛಾಶಕ್ತಿ ಕೊರತೆಯಿರೋ ಅಧಿಕಾರಿಗಳು ಇರೋದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿ ತಾಲ್ಲೂಕಿನಾದ್ಯಂತ ಸುಮಾರು ತೊಂಭತ್ಮೂರು ಶಾಲೆಗಳಿದ್ದೂ ಹತ್ತೊಂಭತ್ತು ಸಾವಿರ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅಣುಗುಣವಾಗಿ ಸರ್ಕಾರ ಕೂಡಾ ಮೊದಲ ಹಂತದಲ್ಲಿ ಹತ್ತೊಂಭತ್ತು ಸಾವಿರ ಸಮವಸ್ತ್ರಗಳನ್ನು ಹುಬ್ಬಳ್ಳಿಯ ಶಿಕ್ಷಣ ಇಲಾಖೆಗೆ ಪೂರೈಸಿದೆ. ವಿಚಿತ್ರ ಅಂದ್ರೆ ದೇವರು ಕೊಟ್ರು ಪೂಜಾರಿ ಕೊಡ್ಲಿಲ್ಲ ಅನ್ನೋ ಹಾಗೆ ಈತನಕ ಆ ಸಮವಸ್ತ್ರಗಳು ವಿದ್ಯಾರ್ಥಿಗಳ ಪಾಲಾಗದೇ ಇಟ್ಟ ಜಾಗದಲ್ಲೇ ಹಾಳಾಗುವಂತಾಗಿವೆ.
ಇನ್ನೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನ ಕೇಳಿದ್ರೆ ಸಕಾರಾತ್ಮಕವಲ್ಲದ ಸಬೂಬೊಂದನ್ನ ಕೊಡ್ತಾರೆ. ಮೊದಲ ಹಂತದಲ್ಲಿ ಹತ್ತೊಂಭತ್ತು ಸಾವಿರ ಸಮವಸ್ತ್ರಗಳು ಬಂದಿದ್ರೂ ಸಹ ಎರಡನೇ ಹಂತದ ಸಮವಸ್ತ್ರಕ್ಕಾಗಿ ಕಾಯ್ತಿದ್ದಾರಂತೆ.ಜೊತೆಗೆ ಹಳೆಯ ಸಮವಸ್ತ್ರ ಬಳಸಿದರೂ ಏನ್ ಸಮಸ್ಯೆಯಿಲ್ಲ ಅನ್ನೋ ಉತ್ತರವನ್ನ ಸಲೀಸಾಗಿ ಕೊಡ್ತಾಯಿದಾರೆ.
ಶಿಸ್ತು ಬದ್ಧವಾದ ಶಿಕ್ಷಣ ಕೊಟ್ಟು ಸುಸ್ಥಿರ ಬದುಕಿಗೆ ದಾರಿದೀಪವಾದ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಸಮಯಪಾಲನೆಯನ್ನ ಮರೆತಿದ್ದಾರೆ. ಅಲ್ಲದೇ ಸಮಸ್ಯೆಗಳಿಲ್ಲದ ಸರಿದಾರಿಯಲ್ಲಿ ಸಾಗಬೇಕಾದ ಅಧಿಕಾರಿಗಳ ದಾರಿಯೇ ಸಮಸ್ಯೆಯಿಂದ ಕೂಡಿದ್ದೂ ಸಮವಸ್ತ್ರ ವಿತರಣೆಯ ವಿಳಂಬ ನೀತಿ ಸಾರ್ವಜನಿಕರಲ್ಲಿ ಸಂಶಯ ಮೂಢಿಸಿವೆ.