Publish Date: Mon, 27 Sep 2021 (21:05 IST)
Updated Date: Mon, 27 Sep 2021 (21:07 IST)
ಕೇಂದ್ರದ ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಕೆಲವು ರೈತ ಸಂಘಟನೆಗಳು ಭಾರತ ಬಂದ್ಗೆ ಇಂದು ಕರೆ ನೀಡಿದ್ದು, ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಕೆಲವರು ಪ್ರತಿಭಟನೆ ಮಾಡುತ್ತಿರುವುದನ್ನು ಹೊರತುಪಡಿಸಿದರೆ ಈ ಪ್ರತಿಭಟನೆಗೆ ಜನರು ಉತ್ಸಾಹ ತೋರುತ್ತಿಲ್ಲ.
ಹಲವೆಡೆಗಳಲ್ಲಿ ಪ್ರತಿಭಟನಾಕಾರರೇ ಜನರು, ವ್ಯಾಪಾರಸ್ಥರಲ್ಲಿ ಹೋಗಿ ಧಮ್ಕಿ ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ಆದರೆ ಕೆಲವರು ಮಾತ್ರ ಪ್ರತಿಭಟನಾಕಾರರ ಉಸಾಬರಿಯೇ ಬೇಡವೆಂದು ವ್ಯಾಪಾರ- ವಹಿವಾಟು ಬಂದ್ ಮಾಡಿದ್ದರೆ, ಹಲವು ಜಿಲ್ಲೆಗಳಲ್ಲಿ ಯಾರೂ ಪ್ರತಿಭಟನಾಕಾರರ ಮಾತನ್ನು ಕೇಳದೇ ಇರುವುದು ಕಂಡುಬಂದಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ಗೆ ಸಹಕರಿಸುವಂತೆ ಆಟೋ ಮೂಲಕ ಮನವಿ ಮಾಡಿದರೂ ಯಾರೂ ಕಿವಿಗೊಡುತ್ತಿಲ್ಲ. ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.
ಕೊಪ್ಪಳದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ತಲೆ ಮೇಲೆ ಇಟ್ಟಿಗೆ ಇಟ್ಟುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದರು. ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿ ಸುಗ್ರೀವಾಜ್ಞೆ ಹಿಂಪಡೆಯಲು ಒತ್ತಾಯ ಮಾಡಿದರು. ಹಾಸನ ಮಾರುಕಟ್ಟೆಯಲ್ಲಿ ಸಂಚರಿಸಿ ಪ್ರತಿಭಟನಾಕಾರರ ಆಕ್ರೋಶ…
ಹಾಸನದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಪ್ರತಿಭಟನಾಕಾರರು ಜನರ ಬಳಿ ಹೋಗಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬೆದರಿಸಿ ಬಂದ್ ಮಾಡಿಸುತ್ತಿದ್ದಾರೆ. ಹೊಟ್ಟೆಗೆ ಏನ್ ತಿಂತೀರಿ? ರೈತರೇ ಇಲ್ಲದಿದ್ರೆ ಏನು ಮಾಡ್ತೀರಿ.. ಬಂದ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.