Publish Date: Sun, 11 Nov 2018 (18:56 IST)
Updated Date: Sun, 11 Nov 2018 (18:58 IST)
ಹಜರತ್ ಟಿಪ್ಪು ಸುಲ್ತಾನರು ತಮ್ಮ ಆಡಳಿತಾವಧಿಯಲ್ಲಿ ಬ್ರಿಟಿಷರನ್ನು ಮೈಸೂರು ರಾಜ್ಯದಿಂದ ದೂರವಿಡಲು ಪ್ರಯತ್ನ ಮಾಡಿದರು. ಈ ದೇಶದ ಹಿಂದೂ ದೇವಾಲಯಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಧನ ಸಹಾಯ ಮಾಡುತ್ತಿದ್ದರು ಅವರು ಎಂದಿಗೂ ಹಿಂದುತ್ವವನ್ನು ವಿರೋಧಿಸಿದವರಲ್ಲ ಎಂದು ಸಚಿವ ಹೇಳಿದ್ದಾರೆ.
ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಟಿಪ್ಪು ಸುಲ್ತಾನರು ತಮ್ಮ ಸಾಮ್ರಾಜ್ಯದಲ್ಲಿ ಹನ್ನೆರಡು ಜನ ಹಿಂದುಗಳನ್ನು ಮಂತ್ರಿಗಳನ್ನಾಗಿಕೊಂಡಿದ್ದರು. ಅವರು ಸರ್ವಧರ್ಮ ಸಹಿಷ್ಣುತೆಯನ್ನು ಹೊಂದಿದ್ದರು. ಟಿಪ್ಪು ಸುಲ್ತಾನರು ಕಂಚಿ, ಶೃಂಗೇರಿ ಮಠ ಸೇರಿದಂತೆ ಮೈಸೂರು ತಾಲ್ಲೂಕಿನ 156 ಮಠಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಆರ್ಥಿಕ ಸಹಾಯ ಮಾಡುತ್ತಿದ್ದರು. ಟಿಪ್ಪು ಹಿಂದು ವಿರೋಧಿ ಎಂದು ಬಣ್ಣಿಸುವುದು ಸರಿಯಲ್ಲ. ಅವರು ಮೈಸೂರು ರಾಜ್ಯವನ್ನು ಬ್ರಿಟೀಷರಿಂದ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ ಹೊರತು ಧರ್ಮದ ಆಧಾರದಲ್ಲಿ ಅಲ್ಲ ಎಂದು ಹೇಳಿದರು.
ಇಂದಿನ ಪ್ರಸ್ತುತ ಸನ್ನಿವೇಶದಲ್ಲಿ, ರಾಜಕೀಯದಲ್ಲಿ ಹಿಂದಿನ ಸಂದರ್ಭಗಳನ್ನು ಹೋಲಿಕೆ ಮಾಡುವುದು ಸೂಕ್ತವಲ್ಲ. ಇತಿಹಾಸಕ್ಕೆ ಗೌರವ ಹೆಮ್ಮೆ ನೀಡಬೇಕು. ನಾಯಕರನ್ನು ಜಾತಿಗಳಿಗೆ ಸೀಮಿತಗೊಳಿಸಬಾರದು. ರಾಜಕೀಯ ಹಿತಾಸಕ್ತಿಗಾಗಿ ಇತಿಹಾಸವನ್ನು ಮರು ಸೃಷ್ಟಿ ಮಾಡಬಾರದು. ಐತಿಹಾಸಿಕ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ರಾಜಕೀಯ ಬಣ್ಣ ಹಚ್ಚಬಾರದು. ದೇಶದಲ್ಲಿರುವ ಎಲ್ಲ ಜಾತಿ ಧರ್ಮಗಳ, ಎಲ್ಲ ಗಣ್ಯವ್ಯಕ್ತಿಗಳ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.