Publish Date: Thu, 20 Jan 2022 (16:51 IST)
Updated Date: Thu, 20 Jan 2022 (19:53 IST)
ಬೆಂಗಳೂರು : ಶುಕ್ರವಾರ ರಾತ್ರಿಯಿಂದ ಶುರುವಾಗಬೇಕಿದ್ದ ವಾರಾಂತ್ಯದ ಕರ್ಫ್ಯೂ ಬಹುಷಃ ಇರಲಿಕ್ಕಿಲ್ಲ.
ವಿಕೆಂಡ್ ಕರ್ಫ್ಯೂಗೆ ವ್ಯಕ್ತವಾಗ್ತಿರುವ ಜನಾಕ್ರೋಶ ಮತ್ತು ಪಕ್ಷದಲ್ಲಿಯೇ ಕೇಳಿಬರುತ್ತಿರುವ ಅಪಸ್ವರದ ಕಾರಣದಿಂದಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.
ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಉನ್ನತಮಟ್ಟದ ಸಭೆ ಕರೆದಿದ್ದು, ಈ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದತಿ ತೀರ್ಮಾನ ತೆಗೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ.
ಮುಖ್ಯಮಂತ್ರಿಗಳು ಈಗಾಗಲೇ ಬೆಂಗಳೂರು ಪೊಲೀಸ್ ಇಲಾಖೆಗೆ ವೀಕೆಂಡ್ ಕರ್ಫ್ಯೂ ಹಿಂಪಡೆಯುವ ಸುಳಿವನ್ನು ರವಾನಿಸಿದ್ದಾರೆ.
ಇದೇ ವೇಳೆ, ನೈಟ್ ಕರ್ಫ್ಯೂ ಅವಧಿಯನ್ನು ಕಡಿತ ಮಾಡುವುದು ಸಹ ಹೆಚ್ಚು ಕಡಿಮೆ ಫಿಕ್ಸ್ ಆಗಿದೆ. ರಾತ್ರಿ 11ರಿಂದ ರಾತ್ರಿ ನೈಟ್ ಕರ್ಫ್ಯೂ ಶುರುವಾಗಿ ಬೆಳಗಿನ ಜಾವ ಐದಕ್ಕೆಲ್ಲಾ ಅಂತ್ಯವಾಗುವ ನಿರೀಕ್ಷೆಯಿದೆ. ಆದರೆ ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಈಗಿರುವ 50-50 ನಿಯಮಗಳನ್ನು ಮಾತ್ರ ಮುಂದುವರೆಸುವ ಸಾಧ್ಯತೆ ಇದೆ.