Publish Date: Fri, 01 Oct 2021 (21:33 IST)
Updated Date: Fri, 01 Oct 2021 (21:35 IST)
ನಗರದಲ್ಲಿ ಮುಖ್ಯ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಹತ್ತು ದಿನಗಳ ಒಳಗೆ ಆಗಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿನ್ನೆ ಕಂದಾಯ ಸಚಿವರ ಮುಂದೆ ರಸ್ತೆ ಪರಿಸ್ಥಿತಿ ಪರಿಶೀಲನೆ ಆಗಿದೆ, ಎಲ್ಲಾ ವಿಚಾರಗಳನ್ನು ವಲಯವಾರು ಮುಖ್ಯ ಅಭಿಯಂತರರು ಮಾಹಿತಿ ಕೊಟ್ಟಿದ್ದಾರೆ. ವಾರ್ಡ್ ರಸ್ತೆಗಳ ಗುಂಡಿಗಳನ್ನು 20 ದಿನಗಳಲ್ಲಿ ಮುಚ್ಚುವಂತೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಹೊರವಲಯ ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿಯಿಂದ ಬಹಳ ಹಾಳಾಗಿದೆ. 2,500 ಕಿ.ಮೀ. ರಸ್ತೆಯನ್ನು ಕತ್ತರಿಸಲಾಗಿದೆ, ಇದಕ್ಕೆ ಅನುದಾನ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಪೈಥಾನ್ ವಾಹನಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪೈಥಾನ್ ಮಿಶಿನ್ಗಳನ್ನು ಎರಡು ವರ್ಷಗಳ ಹಿಂದೆ ತರಲಾಗಿತ್ತು, ಅವನ್ನು ಗುಂಡಿ ಮುಚ್ಚಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿ ಡೇಂಘಿ ಹೆಚ್ಚಳವಾಗಿದೆ ಎಂಬುದು ನಿಜ. ಆದರೆ ಕಂಟ್ರೋಲ್ ನಲ್ಲಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರದಲ್ಲಿ ಇತರೆ ಮಾದರಿಯ ಫ್ಲೂಗಳೂ ಇದೆ, ಇದನ್ನು ನಿಯಂತ್ರಿಸಲು ಹಾಗೂ ಚಿಕಿತ್ಸೆಗೆ ಬಿಬಿಎಂಪಿ ಕ್ರಮವಹಿಸಿದೆ ಎಂದು ಗೌರವ್ ಗುಪ್ತ ಹೇಳಿದರು.