Publish Date: Sun, 13 Jan 2019 (18:44 IST)
Updated Date: Sun, 13 Jan 2019 (18:46 IST)
ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣದಿಂದ ರಾಜೀನಾಮೆ ನೀಡಬೇಕೆನ್ನುವ ವಿರೋಧ ಪಕ್ಷಗಳ ಒತ್ತಡ ಹಿನ್ನೆಲೆಯಲ್ಲಿ ಮನಶಾಂತಿಗಾಗಿ ಸಚಿವ ಪುಟ್ಟರಂಗಶೆಟ್ಟಿ ದೇವರ ಮೊರೆ ಹೋಗಿದ್ದಾರೆ.
ಬಂಡಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಕಸ್ತೂರಿನ ದೊಡ್ಡಮ್ಮತಾಯಿ ದೇಗುಲಕ್ಕೆ ಮೊದಲ ಬಾರಿಗೆ ಭೇಟಿಯಿತ್ತು ಚಕ್ಕಡಿಗೆ ಈಡುಗಾಯಿಯನ್ನು ಸಚಿವ ಪುಟ್ಟರಂಗಶೆಟ್ಟಿ ಒಡೆದರು.
ಬಳಿಕ, ಮರಿಯಾಲ, ಕೆಲ್ಲಂಬಳ್ಳಿ, ಭೋಗಾಪುರ ಗ್ರಾಮಗಳಿಗೆ ಭೇಟಿ ನೀಡಿ ಎತ್ತಿನ ಬಂಡಿ ರಥಕ್ಕೆ ನಮಿಸಿ ಇಷ್ಟಾರ್ಥ ಬೇಡಿಕೊಂಡರು. ಕಸ್ತೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕ್ಲರ್ಕ್ ಗೆ ಹೋಲಿಸಿರುವುದು ಸರಿಯಿಲ್ಲ. ದೇಶದ ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರುವ ಪ್ರಧಾನಮಂತ್ರಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಂಕ್ರಾಂತಿ ನಂತರ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇವುಗಳು ಬಿಜೆಪಿಯವರ ಊಹಾಪೋಹವಷ್ಟೇ. ಸರ್ಕಾರ ಸುಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.