Publish Date: Wed, 19 Sep 2018 (21:04 IST)
Updated Date: Wed, 19 Sep 2018 (21:06 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರನ್ನ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಕಮಲ ಕಾರ್ಯಕರ್ತನೊಬ್ಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆ ಪತ್ರ ಬರೆದ ಘಟನೆ ನಡೆದಿದೆ.
ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಭರತ್ ಖಂಡ್ರೆ ಎಂಬಾತನೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರದೆ ಇರುವುದಕ್ಕೆ ಬಿ.ಎಸ್.ಯಡಿಯೂರಪ್ಪನವರೇ ಕಾರಣ ಅಂತ ಪತ್ರದಲ್ಲಿ ದೂರಿದ್ದಾನೆ. ಏಕೆಂದ್ರೆ ರಾಜ್ಯದಲ್ಲಿ ಅಮಿತ್ ಶಾ ಹಾಕಿದ್ದ 150 ಮಿಷನ್ ಸಫಲವಾಗುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಕೆಜೆಪಿಯಿಂದ ಬಂದವರಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ಅಧಿಕಾರದಿಂದ ವಂಚಿತವಾಯಿತು. ಅಲ್ಲದೇ ಜಿಲ್ಲೆಯಲ್ಲಿ ಕಮಲ ಪಕ್ಷ ಸಂಪೂರ್ಣ ನೆಲಕಚ್ಚಿದೆ.
ಜಿಲ್ಲೆಯಲ್ಲಿ 5 ಸಾಮಾನ್ಯ ಕ್ಷೇತ್ರಗಳಿದ್ದೂ ವಿಧಾನಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲು ಆಗಿಲ್ಲ. ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಬಂದರೂ ಅದು ಫಲಿಸಿಲ್ಲ. ಜಿಲ್ಲೆಯಲ್ಲಿ ಮೋದಿ ಫಾಲೋವರ್ ಸಂಖ್ಯೆ ಜಾಸ್ತಿ ಇದ್ದು ಯಡಿಯೂರಪ್ಪನವರ ಭಂಟರಿಂದಲೇ ಪಕ್ಷ ಅಧಃಪತನದತ್ತ ಸಾಗುತ್ತಿದೆ. ಹೀಗಾಗಿ ಕೂಡಲೇ ಬಿಎಸ್ವೈರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕು ಅಂತ ಪತ್ರ ಬರೆದಿದ್ದಾರೆ.
ಈಗಾಗಲೇ ಯಡಿಯೂರಪ್ಪ ಆಪರೇಶನ್ ಕಮಲದ ಮೂಲಕ ಸಿಎಂ ಆಗಲು ಹೊರಟಿರುವಾಗ ಬಿಜೆಪಿ ಕಾರ್ಯಕರ್ತನೆ ಈ ರೀತಿ ಪತ್ರ ಬರೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.