Publish Date: Fri, 04 Nov 2022 (17:57 IST)
Updated Date: Fri, 04 Nov 2022 (18:00 IST)
ಬಡಾವಣೆಗೆ ಚಿರತೆ ನುಗ್ಗಿ ಮೂವರ ಮೇಲೆ ಅಟ್ಯಾಕ್ ಮಾಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರದ ಕನಕಗಿರಿಯಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಹಾಗೂ ಸೈಕಲ್ ಸವಾರರ ಮೇಲೆ ಹಾಗೂ ಅರಣ್ಯ ಸಿಬ್ಬಂದಿಯ ಮೇಲೂ ಚಿರತೆ ದಾಳಿ ಮಾಡಿದೆ. ಇದರಿಂದ ಕೆ.ಆರ್.ನಗರದ ಪಟ್ಟಣದ ಜನರಲ್ಲಿ ಆತಂಕದ ವಾತಾವರಣ ಮನೆಮಾಡಿತ್ತು. ಮೊನ್ನೆಯಷ್ಟೆ ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಚಿರತೆ ದಾಳಿ ಮಾಡಿತ್ತು. ಪರಿಣಾಮ ಚಿರತೆ ದಾಳಿಗೆ ಯುವಕ ಮೃತಪಟ್ಟಿದ್ದ. ಇವತ್ತು ಕೆ.ಆರ್.ನಗರ ಪಟ್ಟಣದ ಜನರ ಮೇಲೆ ದಾಳಿ ಮಾಡಿದ ಹಿನ್ನೆಲೆ, ಗಾಯಾಳುಗಳಿಗೆ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ತಲೆನೋವಾಗಿದ್ದ ಚಿರತೆ ಕಡೆಗೂ ಪಟ್ಟಣದ 18 ನೇ ವಾರ್ಡ್ನಲ್ಲಿ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ಮದ್ದು ನೀಡಿ ಚಿರತೆ ಸೆರೆಹಿಡಿದಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಮೈಸೂರು ಮೃಗಾಲಯ ಪಾಲ್ಗೊಂಡಿತ್ತು. ಇದರಿಂದ ಚಿರತೆ ಸೆರೆಯಿಂದ ನಾಗರೀಕರು ನಿಟ್ಟುಸಿರು ಬಿಟ್ಟಿದ್ದಾರೆ.