Publish Date: Sun, 08 Jan 2023 (17:26 IST)
Updated Date: Sun, 08 Jan 2023 (17:30 IST)
ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಐತಿಹಾಸಿಕ ಬೂಕನಬೆಟ್ಟದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ M.S.ಅರ್ಚನಾ ಈ ಆದೇಶ ಹೊರಡಿಸಿದ್ದಾರೆ. ಜನವರಿ 6 ರಿಂದ ಜನವರಿ 22 ರವರೆಗೆ ಜಿಲ್ಲೆಯಾದ್ಯಂತ ರಾಸುಗಳ ಜಾತ್ರೆ, ಸಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಬೂಕನಬೆಟ್ಟದ ಪ್ರವೇಶ ದ್ವಾರದಲ್ಲಿ ಜಾನುವಾರುಗಳ ಜಾತ್ರೆ ರದ್ದು ಎಂದು ಮುಜರಾಯಿ ಇಲಾಖೆ ಪ್ರಕಟಣೆ ಹೊರಡಿಸಿದೆ. ಕಳೆದ ವಾರ ರೈತರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳೀಯ ಶಾಸಕ C.N.ಬಾಲಕೃಷ್ಣ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮೂರು ದಿನಗಳ ಕಾಲ ರಾಸುಗಳ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ದಿಢೀರ್ ಜಾತ್ರೆ ನಿಷೇಧ ಮಾಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂರು ದಿನಗಳ ಕಾಲ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ರೈತರು ಜಾನುವಾರುಗಳನ್ನು ಕಟ್ಟಲು ಸಿದ್ದತೆ ಮಾಡಿಕೊಂಡಿದ್ದು, ಅನೇಕ ಮಾಲೀಕರು ಸಿಹಿ ತಿಂಡಿ, ಕೃಷಿ ಉಪಕರಣದ ಅಂಗಡಿಗಳು, ಹೋಟೆಲ್ಗಳನ್ನು ತೆರೆದಿದ್ದಾರೆ. ಮಾತ್ರವಲ್ಲದೆ ತಾಲ್ಲೂಕು ಆಡಳಿತವು ಬೂಕನಬೆಟ್ಟಕ್ಕೆ ಬರುವ ಎರಡು ಕಡೆಗಳಲ್ಲೂ ಫ್ಲೆಕ್ಸ್ ಅಳವಡಿಸಿ ಪೊಲೀಸರನ್ನು ನಿಯೋಜಿಸಿದೆ.