Publish Date: Sun, 01 Sep 2019 (19:06 IST)
Updated Date: Sun, 01 Sep 2019 (19:08 IST)
ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಜೋಡನೆಗೆ ರಾಜ್ಯ ಸರ್ಕಾರವೇ ಅಂಗಾಂಗ ಕಸಿ ಯೋಜನೆಯಡಿ ನೆರವಿಗೆ ಮುಂದಾಗಿದೆ.
ಬಿಪಿಎಲ್ ಕಾರ್ಡು ಹೊಂದಿದವರ ಸೂಕ್ತ ಚಿಕಿತ್ಸೆಗೆ ಸರಕಾರ ಮುಂದಾಗಿದ್ದು ಈ ಯೋಜನೆಯ ಮೊದಲ ಫಲಾನುಭವಿಯನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಸರ್ಕಾರದ ಅಂಗಾಂಗ ಕಸಿ ಯೋಜನೆಯಡಿ ಬದಲಿ ಹೃದಯ ಜೋಡಣೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಬಾಗಲಕೋಟೆಯ ಸಂಜು ಹೊಸಮನಿ(34) ಯನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ಮಾಡಿದ್ರು.
ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಅಂಗಾಂಗ ಜೋಡಣೆ ಎಂಬುದು ಗಗನ ಕುಸುಮವಾಗಿತ್ತು. ಈ ಹಿನ್ನೆಲೆ ರಾಜ್ಯಸರ್ಕಾರ ಅಂಗಾಂಗ ಕಸಿ ಯೋಜನೆಯಡಿ ಸರ್ಕಾರದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಸಂಪೂರ್ಣ ಹಣ ಕೊಡುವುದರ ಮೂಲಕ ಬಡವರಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದರು.
ಅಂಗಾಂಗ ಕಸಿಗಾಗಿ ಕಾದಿರುವ ಬಡವರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದಲ್ಲಿ ನೋಂದಾಯಿತ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಬಹುದು ಎಂದ್ರು.