Publish Date: Fri, 03 Jun 2022 (19:39 IST)
Updated Date: Fri, 03 Jun 2022 (19:41 IST)
ರಾಜ್ಯದಲ್ಲಿ ಕೆಪಿಸಿಸಿ ಎರಡು ದಿನಗಳ ಕಾಲ (ಜೂನ್ 2 & 3) ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನ ಶಿಬಿರ ಕೊನೆಗೊಂಡಿದೆ. ಇತ್ತೀಚೆಗೆ AICC ರಾಜಸ್ಥಾನದ ಉದಯ್ ಪುರದಲ್ಲಿ ನಡೆಸಿದ್ದ ಚಿಂತನ್ ಶಿಬಿರದ ಮಾದರಿಯಲ್ಲೇ ನಗರದ ಹೊರವಲಯದಲ್ಲಿ ರಾಜ್ಯ ಕಾಂಗ್ರೆಸ್ ಕೂಡ ಚಿಂತನ್ ಶಿಬಿರ ಹಮ್ಮಿಕೊಂಡಿತ್ತು. ಶಿಬಿರದಲ್ಲಿ ರಾಜ್ಯದ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದು, ಮುಂದಿನ ಚುನಾವಣೆ ದೃಷ್ಟಿಯಿಂದ ಈ ಶಿಬಿರ ಮಹತ್ವದ್ದಾಗಿದೆ. ಶಿಬಿರದ ಕೊನೆಯಲ್ಲಿ ಮಾಧ್ಯಮಗೋಷ್ಠಿ ಕರೆದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾವು ಶಿಬಿರದಲ್ಲಿ ಕೃಷಿ, ಆರ್ಥಿಕ, ಪಕ್ಷ ಸಂಘಟನೆ, ರಾಜಕೀಯ ವಿದ್ಯಮಾನ, ಉದ್ಯೋಗ, ಮಹಿಳಾ ಹಾಗೂ ಸಾಮಾಜಿಕ ನ್ಯಾಯದ ಹೆಸರಿನಲ್ಲಿ 6 ಸಮಿತಿಗಳನ್ನು ರಚಿಸಿದ್ದೆವು. ಈ ಶಿಬಿರದಲ್ಲಿ ನಾಯಕರು, ಕಾರ್ಯಕರ್ತರು ಸೇರಿದಂತೆ ಒಟ್ಟು 600 ಮಂದಿ ಹಾಜರಿದ್ದರು. ದಿನಕ್ಕೆ ಸುಮಾರು 12 ರಿಂದ 13 ಗಂಟೆ ಚರ್ಚಿ ನಡೆದಿದೆ. ಶಿಬಿರದಲ್ಲಿ ತೆಗೆದುಕೊಳ್ಳಲಾದ ಕೆಲವು ಮಹತ್ವದ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ಜನರ ಮುಂದಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.