Publish Date: Sat, 19 Nov 2022 (19:49 IST)
Updated Date: Sat, 19 Nov 2022 (19:52 IST)
ಭಯೋತ್ಪಾದನೆಯನ್ನು ಅಥವಾ ಭಯೋತ್ಪಾದನೆಯ ಬೆದರಿಕೆಗಳನ್ನು ಯಾವುದೇ ಧರ್ಮ ಅಥವಾ ಗುಂಪಿಗೆ ಹೋಲಿಕೆ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ. ದೆಹಲಿಯ ಗೃಹ ಸಚಿವಾಲಯ ಆಯೋಜಿಸಿದ್ದ ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹ ಕುರಿತ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತಲೂ ಅಪಾಯಕಾರಿ. ಹಾಗಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಜನಾಂಗದ ಗುಂಪಿಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಹಿಂಸಾಚಾರ ನಡೆಸಲು, ಯುವಸಮೂಹವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳೋದು ಹಾಗೂ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಭಯೋತ್ಪಾದಕರು ನಿರಂತರವಾಗಿ ಹೊಸ – ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ತಮ್ಮ ಗುರುತನ್ನು ಮರೆಮಾಚಲು ಡಾರ್ಕ್ನೆಟ್ ಬಳಸುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ಭಯೋತ್ಪಾದನಾ ಬೆದರಿಕೆಗಳು ವಿಶ್ವದ ಶಾಂತಿಗೆ ಭಂಗ ತರುತ್ತವೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಚಟುವಟಿಕೆಗಳ ನಿಧಿಗೆ ಹಣಕಾಸು ಹರಿದು ಬರೋದ್ರಿಂದಲೇ ಚಟುವಟಿಕೆ ಪೋಷಣೆಯಾಗುತ್ತಿದೆ. ಈ ಬೆಳವಣಿಗೆಯು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.