Publish Date: Fri, 04 Sep 2026 (16:20 IST)
Updated Date: Fri, 04 Sep 2026 (16:28 IST)
ಬೆಂಗಳೂರು: ರೋಡ್ ಮಾಡು ಟೋಲ್ ಹಾಕು; ಟ್ರಾಫಿಕ್ ಕಡಿಮೆ ಮಾಡುತ್ತೇವೆ ಎಂಬುದೇ ಇವರ ಬ್ಯುಸಿನೆಸ್ ಆಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಕೆರೆ ಉಳಿಸಲು ನಾವು ಆಂದೋಲನ ಮಾಡಬೇಕಿದೆ. ಕೆರೆ ಉಳಿಯಬೇಕು ಎಂದರೆ ನಾವು ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು. ಪಾರ್ಕ್ ಜಾಗ ಕಬ್ಜಾ ಮಾಡಲು ಸರ್ಕಾರ ಕಾನೂನು ತಂದಿತ್ತು ಎಂದರು.
ಬೆಂಗಳೂರು ಜನ ಇದನ್ನ ವಿರೋಧಿಸಿದರು. ಪಾರ್ಕ್ಗಳನ್ನು ಉಳಿಸಲು ಜನ ಜನಾಂದೋಲನ ಮಾಡಿದರು. 91 ವರ್ಷದ ಯಲ್ಲಪ್ಪ ರೆಡ್ಡಿ ಅವರ ನೇತೃತ್ವದಲ್ಲಿ ಆಂದೋಲನ ನಡೆಯಿತು. ಈಗ ತಾತ್ಕಾಲಿಕವಾಗಿ ನಮಗೆ ಜಯ ಸಿಕ್ಕಿದೆ ಎಂದು ವಿವರಿಸಿದರು.
ಈ ಸರ್ಕಾರಕ್ಕೆ ಟನಲ್ ಕೊರೆಯಲು ಯಾರು ಹೇಳಿದ್ದಾರೋ ಗೊತ್ತಿಲ್ಲ. ಹೆಬ್ಬಾಳ್ ಲೇಕ್ ಜಾಗವನ್ನು ಮತ್ತು ಬಫರ್ ವಲಯದ ಸುರಂಗಕ್ಕೆ ಬಳಕೆ ಮಾಡ್ತಿದ್ದಾರೆ. ಈ ಶಾರ್ಟ್ ಟನಲ್ ಮಾಡ್ತಿರೋದಕ್ಕೆ ಈ ಜಾಗ ಬಳಕೆ ಮಾಡ್ತಿದ್ದಾರೆ. ಕಳೆದ ವರ್ಷ ಲೇಕ್ ಬಿಲ್ ತಂದಿದ್ದರು. ಸುಪ್ರೀಂ ಕೋರ್ಟ್ನ ಕಾನೂನಿಗೆ ವಿರುದ್ಧ ಇದೆ ಎಂದು ಮಾನ್ಯ ರಾಜ್ಯಪಾಲರು ಮಸೂದೆ ಹಿಂತಿರುಗಿಸಿದ್ದರು. ಈಗ ಪುನಃ ಮತ್ತೆ ಅದೇ ಬಿಲ್ ಪಾಸ್ ಮಾಡಿದ್ದಾರೆ ಎಂದು ದೂರಿದರು. ಹೆಬ್ಬಾಳದಲ್ಲಿ 3.5 ಎಕರೆ ಜಾಗದಲ್ಲಿ ಕಾಮಗಾರಿ ನಡಿತಿದೆ. ಪಾರ್ಕ್ ಮತ್ತು ಕೆರೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಟೀಕಿಸಿದರು.
ಸರ್ಕಾರ ಯಾವುದೇ ಯೋಜನೆ ಮಾಡಬೇಕಾದರೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಬಿಎಂಎಲ್ಟಿಎ ಕಾನೂನು ಹೇಳುತ್ತದೆ. ಬೆಂಗಳೂರಿನ ಹಿತರಕ್ಷಣೆಗೆ ಇದ್ದ ಮೂರು ಕಾನೂನಿನ ಮೇಲೆ ಸರ್ಕಾರ ದಾಳಿ ಮಾಡಿದೆ ಎಂದು ಆಕ್ಷೇಪಿಸಿದರು. ಸರ್ಕಾರ ಫ್ಲೈ ಓವರ್ನಲ್ಲಿ 2 ವೀಲರ್ ಓಡಾಟ ನಿಷೇಧ ಮಾಡಿದೆ. ಸುರಕ್ಷತೆಯ ಕಾರಣ ಎಂದು ಹೇಳಿದ್ದಾರೆ ಎಂದು ಅವರು ಟೀಕಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ