Publish Date: Wed, 27 Nov 2024 (10:29 IST)
Updated Date: Wed, 27 Nov 2024 (10:36 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಕರಿಗೇ ವಿದ್ಯಾರ್ಥಿಗಳು ಕ್ವಾಟ್ಲೆ ಕೊಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕನಿಷ್ಠ ಶಿಕ್ಷೆ ಕೊಡಲಾದರೂ ಅವಕಾಶ ಕೊಡಿ ಎಂದು ಶಿಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಮೊನ್ನೆಯಷ್ಟೇ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯೊಬ್ಬ ಆನ್ ಲೈನ್ ಸಂವಾದದ ವೇಳೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಮಾನ ಕಳೆದಿದ್ದ. ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರೆಂದರೆ ಭಯವೇ ಇಲ್ಲವಾಗಿದೆ. ಇದರಿಂದಾಗಿ ಶಿಕ್ಷಕರಿಗೇ ಎದುರುತ್ತರ ಕೊಡುವ ಮತ್ತು ಅವರಿಗೇ ಕೀಟಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಮಕ್ಕಳ ವಕ್ರ ಬುದ್ಧಿಯನ್ನು ತಿದ್ದಲು ಶಿಕ್ಷಕರಿಗೆ ಅವಕಾಶವೇ ಇಲ್ಲವಾಗಿದೆ. ಹೀಗಾಗಿ ಅವಹೇಳನ ಮಾಡುವ, ಅಶಿಸ್ತು ತೋರುವ ವಿದ್ಯಾರ್ಥಿಗಳಿಗೆ ಕನಿಷ್ಠ ಮಟ್ಟದಲ್ಲಾದರೂ ಶಿಕ್ಷೆ ಕೊಡಲು ಶಿಕ್ಷಕರಿಗೆ ಅವಕಾಶ ನೀಡಬೇಕು ಎಂದು ಖಾಸಗಿ ಶಾಲಾ ಸಂಘಟನೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ.
ಬಹುತೇಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ವರ್ತನೆಗೆ ಕಡಿವಾಣ ಹಾಕಲಾಗದೇ ಅಸಹಾಯಕ ಸ್ಥಿತಿ ವ್ಯಕ್ತಪಡಿಸುತ್ತವೆ. ಅಲ್ಲದೆ ಮಕ್ಕಳಿಗೆ ಶಿಕ್ಷೆ ನೀಡಬಾರದು ಎಂಬ ಕಾರಣಕ್ಕೆ ಪೋಷಕರೂ ಕೆಲವೊಮ್ಮೆ ಶಿಕ್ಷಕರ ವಿರುದ್ಧವೇ ದೂರು ನೀಡುವ ಘಟನೆಗಳೂ ಇವೆ. ತಪ್ಪು ಮಾಡಿದಾಗ ತಿದ್ದುವುದು ಶಿಕ್ಷಕರ ಕರ್ತವ್ಯ. ಆದರೆ ತಿದ್ದುವ ಅಧಿಕಾರವೇ ಶಿಕ್ಷಕರಿಗೆ ಇಲ್ಲ. ಇದು ಮರಳಿ ಬರಬೇಕೇ ನೀವೇ ಹೇಳಿ.