Publish Date: Tue, 28 Mar 2023 (09:37 IST)
Updated Date: Tue, 28 Mar 2023 (10:10 IST)
ಮಂಡ್ಯ : ಕಳೆದ ಲೋಕಸಭಾ ಚುನಾವಣೆ ವೇಳೆಯಿಂದ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನಾಯಕರ ನಡುವಿನ ಸಮರ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ.
ಮಂಡ್ಯದಲ್ಲಿ ದಳಪತಿಗಳ ಕೋಟೆಯನ್ನು ಛಿದ್ರ ಮಾಡಿ ಬಿಜೆಪಿ ಸಾರ್ವಭೌಮತ್ವ ಸ್ಥಾಪಿಸಬೇಕೆಂದು ರೆಬಲ್ ಲೇಡಿ ಪಣತೊಟ್ಟಂತೆ ಕಾಣುತ್ತಿದ್ದು, ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಧುಮುಕಿ ಜೆಡಿಎಸ್ ವಿರುದ್ಧ ರಣಕಹಳೆ ಊದಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ರಾಷ್ಟ್ರ ರಾಜಕೀಯಕ್ಕೆ ಗುಡ್ ಬಾಯ್ ಹೇಳಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದ್ದವು. ಈ ಮಾತುಗಳಿಗೆ ಸುಮಲತಾ ಅಂಬರೀಶ್ ಕಡ್ಡಿ ತುಂಡರಿಸಿದ ಹಾಗೆ ನಾನು ರಾಜ್ಯ ರಾಜಕೀಯಕ್ಕೆ ಬರಲ್ಲ ಎಂದು ಎಲ್ಲಿಯೂ ಹೇಳಿಲ್ಲ.
ಸಂದರ್ಭಕ್ಕೆ ತಕ್ಕ ಹಾಗೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಮಾತಿನ ಹಿಂದೆ ರೆಬೆಲ್ ಲೇಡಿ ದಳಪತಿಗಳ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಸಾರ್ವಭೌಮತ್ವ ಸ್ಥಾಪನೆ ಮಾಡುವ ಲೆಕ್ಕಾಚಾರವಿದೆ. ಇದೇ ತಿಂಗಳ 17ರಂದು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ ಸುಮಲತಾ ಅಂಬರೀಶ್ ಅಂದಿನಿಂದ ಮಂಡ್ಯ ಜಿಲ್ಲೆಯ ಚುನಾವಣೆಯ ಅಖಾಡದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.