Publish Date: Sun, 28 Nov 2021 (14:17 IST)
Updated Date: Sun, 28 Nov 2021 (16:00 IST)
ಕೊಪ್ಪಳ : ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾದ ದುರ್ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳಪೆ ಧಾನ್ಯಗಳ ಊಟ ಸೇವಿಸಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಡಶೇಸಿ ಮುರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಅನ್ನ ಸಾರು ಊಟ ಮಾಡಿದ್ದ ವಿದ್ಯಾರ್ಥಿಗಳು ಇಂದು ಅಸ್ವಸ್ಥರಾಗಿದ್ದಾರೆ.
ಇಂದು ಮುಂಜಾನೆ ಇಡ್ಲಿ ತಯಾರಿಸುವಾಗ ಇಡ್ಲಿ ಹಿಟ್ಟಿನಲ್ಲಿ ಹುಳಗಳು ಕಂಡು ಬಂದಿದ್ದವು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಹಿಟ್ಟಿನಲ್ಲಿ ಹುಳುಗಳು ಇರುವ ಹಿನ್ನಲೆ ವಿದ್ಯಾರ್ಥಿಗಳು ಊಟ ಬಿಟ್ಟಿದ್ದರು. 2 ತಾಸಿನ ನಂತರ ಪಲಾವ್ ತಯಾರಿಸಿ ವಸತಿ ಶಾಲೆ ಸಿಬ್ಬಂದಿ ತಿಂಡಿ ನೀಡಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿಗಳು ತಲೆ ಸುತ್ತಿ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ಕುಷ್ಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.