ಶಿವಮೊಗ್ಗ: ವರ್ಷಕ್ಕೆ ಮೂರು ಬಾರಿಯೇ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಇದೀಗ ಅದನ್ನು ಎರಡು ಬಾರಿಗೆ ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಈ ಬೆಳವಣಿಗೆ ಮಾಧ್ಯಮಗಳ ಸೃಷ್ಟಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ಪರೀಕ್ಷೆಗಳ ಸಂಖ್ಯೆಯನ್ನು ಎರಡು ಬಾರಿಗೆ ಇಳಿಸಲಾಗುತ್ತದೆ ಎಂದು ತಪ್ಪಾಗಿ ಪ್ರಕಟಿಸಿದ್ದವು. ಇದರಿಂದ ಮಕ್ಕಳಲ್ಲಿ ವೃಥಾ ಗೊಂದಲ ಉಂಟಾಗಲಿದೆ. ಅವರು ಧೈರ್ಯ ಕಳೆದುಕೊಳ್ಳಲಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕೆಂದರು. ಆ ಬಗ್ಗೆ ಅನಗತ್ಯ ಚರ್ಚೆಗಳೂ ಬೇಡ ಎಂದು ಸಲಹೆ ನೀಡಿದರು.
ಇನ್ನೂ ಈ ರೀತಿಯ ಬದಲಾವಣೆ ತರುವುದಿದ್ದರೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಅದನ್ನು ಮಾಧ್ಯಮಗಳಿಗೆ ತಿಳಿಸಿಯೇ ಮುಂದುವರೆಯಲಿದ್ದೇವೆ. ಹೀಗಾಗಿ ಆತುರ ಬೇಡ ಎಂದರು.