Publish Date: Sun, 16 Oct 2016 (14:11 IST)
Updated Date: Sun, 16 Oct 2016 (15:34 IST)
ನಾಳೆ 12 ಗಂಟೆಗೆ ಸಭಾಪತಿ ಕೆ.ಬಿ. ಕೋಳಿವಾಡ ಅವರನ್ನು ಭೇಟಿಯಾಗಿ ಶಾಸಕ ರಾಜೀನಾಮೆ ಸಲ್ಲಿಸುತ್ತೇನೆ, ಬಳಿಕ ಕಾಂಗ್ರೆಸ್ ಪಕ್ಷಕ್ಕೂ ಗುಡ್ ಬೈ ಹೇಳುತ್ತೇನೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಪಕ್ಷ ತೊರೆದ ನಂತರ, ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನಿಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನನಗೆ ಎಲ್ಲ ಪಕ್ಷದಲ್ಲೂ ಒಳ್ಳೆಯ ಸ್ನೇಹಿತರಿದ್ದಾರೆ. ಬಿಜೆಪಿಯ ಹಲವು ನಾಯಕರು ನನ್ನ ಜತೆ ಮಾತನಾಡಿದ್ದಾರೆ. ಕಮಲದ ರಾಜ್ಯಾಧ್ಯಕ್ಷ ಬಿ. ಸ್. ಯಡಿಯೂರಪ್ಪ ಸಹ ನನ್ನ ಜತೆ ಮಾತನಾಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ. ಆದರೆ ಯಾವ ಪಕ್ಷವನ್ನು ಸೇರುತ್ತೇನೆ ಎಂಬುದನ್ನು ನಂಜನಗೂಡು ಶಾಸಕ ಗುಟ್ಟಾಗಿಟ್ಟಿದ್ದಾರೆ.
ಪ್ರಸಾದ್ 'ಕೈ' ಬಿಡುತ್ತಿದ್ದಾರೆ ಎಂಬುದು ಹೊರ ಬರುತ್ತಿದ್ದಂತೆ ಅವರ ನಿವಾಸವೀಗ ರಾಜಕೀಯ ಬೆಳವಣಿಗೆಯ ತಾಣವಾಗಿ ಬದಲಾಗಿದೆ. ಜೆಡಿಎಸ್, ಬಿಜೆಪಿ ಅವರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ರಾಜಕೀಯ ಕಸರತ್ತು ನಡೆಸುತ್ತಿದ್ದು ಪ್ರಸಾದ್ ಯಾವ ಪಕ್ಷದ ತೆಕ್ಕೆಕೆ ಸೇರುತ್ತಾರೆ ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ. ನಿನ್ನೆ ಸ್ಥಳೀಯ ಮುಖಂಡ ಪ್ರತಾಪ್ ಸಿಂಹ ಮತ್ತು ಬಿಜೆಪಿ ಇತರ ನಾಯಕರ ನಿಯೋಗ ಪ್ರಸಾದ್ ಅವರನ್ನು ಭೇಟಿಯಾದ ಮುಂದುವರೆದ ಭಾಗವಾಗಿ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ನೇತೃತ್ವದ ನಿಯೋಗ ಕೂಡ ಕೈ ನಾಯಕನ ಜತೆ ಮಾತುಕತೆ ನಡೆಸಿದರು.
ಬಳಿಕ ವರದಿಗಾರರೊಂದಿಗೆ ಮಾತನಾಡುತ್ತಿದ್ದ ವೀರಯ್ಯ, ಪ್ರಸಾದ್ ಕೇವಲ ರಾಜ್ಯ ನಾಯಕರಲ್ಲ, ರಾಷ್ಟ್ರ ನಾಯಕರು, ಕಾಂಗ್ರೆಸ್ ಅವರನ್ನು ಕಡೆಗಣಿಸಿದೆ ಎಂದಿದ್ದಾರೆ.
ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಸಾದ್ ಅವರನ್ನು ಭೇಟಿಯಾಗಿ ಪಕ್ಷ ತೊರೆಯದಂತೆ ಕೊನೆ ಕ್ಷಣದಲ್ಲಿ ಮನವೊಲಿಸಲು ಕಾಂಗ್ರೆಸ್ ನಾಯಕರು ಸಹ ಕಾಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ