Publish Date: Mon, 25 Aug 2025 (16:05 IST)
Updated Date: Mon, 25 Aug 2025 (16:12 IST)
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತ ಸಂಪೂರ್ಣ ತನಿಖೆಯನ್ನು ಕೂಡಲೇ ಎನ್ಐಎಗೆ ಕೊಡಬೇಕಿದೆ. ಇದರ ಮೂಲಕ ಅಗತ್ಯವಾದಲ್ಲಿ ಹಣಕಾಸು ವಿಷಯವಾಗಿ ಇ.ಡಿ. ತನಿಖೆ ನಡೆಸಲು ಅವಕಾಶ ಆಗಲಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷದ ಸಭೆ ನಡೆದಿದೆ. ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂಬ ವಿಚಾರ ಚರ್ಚೆಗೆ ಒಳಪಟ್ಟಿದೆ ಎಂದು ವಿವರಿಸಿದರು.
ಬುರುಡೆ ವ್ಯಕ್ತಿಯ ಪ್ರಾಥಮಿಕ ತನಿಖೆ ನಡೆಸುತ್ತಿದ್ದರೆ ಇಂಥ ಅಪಪ್ರಚಾರ ನಡೆದು ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ ಆಗುತ್ತಿರಲಿಲ್ಲ ಎಂದು ತಿಳಿಸಿದರು. ಆರೋಪದಲ್ಲಿ ಹುರುಳಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದರು.
ಬುರುಡೆ ವ್ಯಕ್ತಿ ಮತ್ತು ಸುಜಾತ ಭಟ್ ವಿಷಯದಲ್ಲಿ ಮಾಧ್ಯಮಗಳು ಎಲ್ಲ ವಿಚಾರಗಳನ್ನು ಬೆಳಕಿಗೆ ತಂದಿವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿ ಎಲ್ಲ ಪಕ್ಷದವರು ಕೇಸರಿ ಧ್ವಜ ಕಟ್ಟಿ ಮಂಜುನಾಥ ಸ್ವಾಮಿ ಜೊತೆ ಇದ್ದೇವೆ ಎಂದು ರ್ಯಾಲಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಇಸ್ಲಾಂ ಧರ್ಮದವರಾದ ಭಾನು ಮುಷ್ತಾಕ್ ಅವರು ಮೂರ್ತಿ ಪೂಜೆ, ಹಿಂದೂ ದೇವತೆಗಳನ್ನು ನಂಬುವುದಿಲ್ಲ. ನನಗೆ ನಾಡದೇವತೆ ಚಾಮುಂಡಿಯ ಮೇಲೆ ನನಗೆ ನಂಬಿಕೆ ಇದೆ; ಹಿಂದೂ ಧರ್ಮದ ಮೇಲೆ ನಂಬಿಕೆ ಇದೆ; ಈ ಆಚಾರ ವಿಚಾರಕ್ಕೆ ಬದ್ಧನಾಗಿದ್ದೇನೆ ಎಂದು ಭಾನು ಮುಷ್ತಾಕ್ ಅವರು ಹೇಳಿಕೆ ಕೊಡಬೇಕು ಎಂದು ತಿಳಿಸಿದರು. ಇಲ್ಲವಾದರೆ ರಾಜ್ಯ ಸರಕಾರದ ದಸರಾ ಉದ್ಘಾಟನೆ ಕುರಿತು ಆಹ್ವಾನವನ್ನು ಅವರು ತಿರಸ್ಕಾರ ಮಾಡಿದರೆ ಸೂಕ್ತ ಎಂದರು.
ಕನ್ನಡದ ಕವಿ ನಿಸಾರ್ ಅಹ್ಮದ್ ಅವರು ಈ ಹಿಂದೆ ದಸರಾ ಉದ್ಘಾಟಿಸಿದ್ದರು. ಅವರ ಕುರಿತಂತೆ ಗೌರವವಿದ್ದು, ಆಗ ಅದನ್ನು ವಿವಾದ ಮಾಡಿರಲಿಲ್ಲ. ಭಾನು ಮುಷ್ತಾಕ್ ಅವರು ಎಡಪಂಥೀಯ ಮಹಿಳೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದು, ಪತ್ರಿಕೆಗಳಲ್ಲಿ ಬಂದಿದೆ. ಆದ್ದರಿಂದ ಅವರಿಗೆ ಆಹ್ವಾನ ಕೊಟ್ಟಿದ್ದನ್ನು ವಿರೋಧಿಸಲಿದ್ದೇವೆ ಎಂದು ತಿಳಿಸಿದರು.