ರಾಜ್ಯದಲ್ಲಿ ಎಸ್.ಸಿ./ಎಸ್.ಟಿ. ಜನಸಂಖ್ಯೆ ಆಧಾರದ ಮೇಲೆ ಈ ವರ್ಗದವರ ಕಲ್ಯಾಣಕ್ಕಾಗಿ ಒದಗಿಸಲಾದ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡುವ ಹಾಗೂ ಉಳಿದ ಅನುದಾನ ಲ್ಯಾಪ್ಸ್ ಆಗದಂತೆ ಮುಂದುವರೆಸುವ ಹಾಗೂ ಅನುದಾನವನ್ನು ಸಮರ್ಪಕವಾಗಿ ಬಳಸಲು ಅನುವಾಗುವಂತೆ ವಿಶೇಷ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಇಡೀ ರಾಷ್ಟ್ರದಲ್ಲಿಯೇ ಈ ಕಾನೂನು ಜಾರಿಗೊಳಿಸಿದ ರಾಜ್ಯ ಕರ್ನಾಟಕವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಅವರು ಮಂಗಳವಾರ ಕಲಬುರಗಿಯಲ್ಲಿ ಜಿಲ್ಲಾ ಆಡಳಿತ, ಕಲಬುರಗಿ ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 60ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾನೂನಿನ ಅನ್ವಯ ಹಣ ಖರ್ಚು ಮಾಡದಿದ್ದರೆ, ಹಣ ಬೇರಡೆ ವರ್ಗಾವಣೆ ಮಾಡಿಕೊಂಡರೆ, ಕ್ರಿಯಾ ಯೋಜನೆ ರೂಪಿಸದೇ ಹಣ ಖರ್ಚು ಮಾಡಿದರೆ ಮತ್ತು ಹಣ ಲ್ಯಾಪ್ಸ್ ಮಾಡಿದರೆ ಅಂತಹ ಇಲಾಖಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು, ಶಿಕ್ಷೆಗೊಳಪಡಿಸಲು, ಉದ್ದೇಶ ಪೂರ್ವಕವಾಗಿ ಹಣ ಬಳಕೆ ಮಾಡದಿದ್ದರೆ ಕಾರಾಗೃಹ ಶಿಕ್ಷೆ ಸಹ ಒದಗಿಸಲು ಈ ಕಾನೂನಿನಲ್ಲಿ ಅವಕಾಶವಿರುತ್ತದೆ ಎಂದು ಸಚಿವರು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.