ಬೆಂಗಳೂರು: ಜೂನ್ 3ರಂದು ನೈರುತ್ಯ ಮುಂಗಾರು ರಾಜ್ಯ ಪ್ರವೇಶಿಸಲಿದ್ದು, 5ನೇ ತಾರೀಕಿನ ವೇಳೆಗೆ ರಾಜ್ಯದ ಎಲ್ಲಾ ಭಾಗಗಳಿಗೂ ವ್ಯಾಪಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ಮೇ 30ರಂದು ಮುಂಗಾರು ಪ್ರವೇಶಿಸಲಿದ್ದು, ನಂತರ ದಕ್ಷಿಣ ಒಳನಾಡು ಭಾಗದ ಎಲ್ಲ ಕಡೆ ಮತ್ತು ಕರಾವಳಿ ಭಾಗಗಳ ಮೂಲಕ ರಾಜ್ಯಕ್ಕೆ ಅಪ್ಪಳಿಸಲಿದೆ ಎಂದು ತಿಳಿದುಬಂದಿದೆ.
ಇಲ್ಲಿಯವರೆಗಿನ ವಾತಾವರಣ ನೋಡಿದರೆ ಈ ಬಾರಿಯ ಮುಂಗಾರು ಪ್ರಬಲವಾಗಿರಲಿದೆ ಎನ್ನಲಾಗಿದೆ.
ಇನ್ನು ಚಂಡಮಾರುತ ಮತ್ತು ಸಮುದ್ರದ ಮೇಲ್ಮೈನಲ್ಲಿ ಬೀಸುತ್ತಿರುವ ಸುಳಿಗಾಳಿಯ ಪರಿಣಾಮ ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.