Publish Date: Mon, 19 Feb 2024 (18:01 IST)
Updated Date: Mon, 19 Feb 2024 (18:06 IST)
ಬೆಂಗಳೂರು-ವಿಜಯಪುರ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಘೋಷವಾಕ್ಯ ಬದಲಾವಣೆ ಮಾಡಿದ ವಿಚಾರ ರಾಜಕೀಯ ಆಯಾಮ ಪಡೆಯುತ್ತಿದ್ದಂತೆಯೇ ಆ ಬಗ್ಗೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಯಾವ ನಿಟ್ಟಿನಲ್ಲಿ ಈ ರೀತಿಯಾಗಿ ಘೋಷ ವಾಕ್ಯ ಬದಲಾವಣೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಅದು ಕುವೆಂಪು ಅವರ ಕವಿತೆಯ ಸಾಲುಗಳು. ನಾವು ಕುವೆಂಪು ಆಶಯದ ರೀತಿಯಲ್ಲೇ ನಡೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳಿದರು.ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆಗೆ ಕಾರಣ ಏನೆಂಬುದು ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.
ವಿದ್ಯೆ ಅಂದರೆ ಸರಸ್ವತಿ. ಕೈ ಮುಗಿಯುವುದು ನಮ್ಮ ಸಂಪ್ರದಾಯ. ಅದು ಭಿಕ್ಷೆ ಬೇಡುವುದು ಅಲ್ಲ ಅಂತ ನನ್ನ ಅಭಿಪ್ರಾಯ. ಏನಾದರೂ ಉದಾಹರಣೆಗಾಗಿ ಆ ರೀತಿ ಮಾಡಿರಬಹುದು. ಮಕ್ಕಳ ಹಕ್ಕು ಚ್ಯುತಿಯಾಗಿ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಕೈ ಮುಗಿದು ಒಳಗೆ ಬಂದು ನಿಮ್ಮ ಹಕ್ಕುನ್ನು ಪ್ರತಿಪಾದಿಸಿ ಅಂತ ಇದ್ದರೆ ಚನ್ನಾಗಿ ಇರುತ್ತಿತ್ತು. ಬಿಜೆಪಿಯವರು ವಿರೋಧ ಮಾಡಲಿ. ಯಾವುದೇ ಕಾರಣಕ್ಕೂ ಕುವೆಂಪು ಅವರಿಗೆ ನಮ್ಮ ಸರ್ಕಾರ ಅವಮಾನ ಮಾಡಲ್ಲ ಎಂದು ಸಚಿವರು ಹೇಳಿದರು.
ಕುವೆಂಪು ಅವರ ಕವಿತೆಯ ಸಾಲುಗಳನ್ನು ತೆಗೆಯದೇ ಇನ್ನಷ್ಟು ಚೆನ್ನಾಗಿ ಘೋಷವಾಕ್ಯ ಮಾಡಬಹುದಿತ್ತು. ಸರಸ್ವತಿ ಹಾಗೂ ಜ್ಞಾನಕ್ಕೆ ಜಾತಿ, ಧರ್ಮ ಇರಲ್ಲ. ಬಿಜೆಪಿ ಅವರು ಹೇಳಿದ್ದಾರೆ ಅಂತ ಬದಲಾವಣೆ ಮಾಡಬೇಕು ಅಂತೇನಿಲ್ಲ. ವೈಯಕ್ತಿಕವಾಗಿ ಇದನ್ನು ಇಟ್ಕೊಂಡು ಹಕ್ಕನ್ನು ಪ್ರತಿಪಾದಿಸು ಅಂತ ಇದ್ದರೆ ಒಳ್ಳೆಯದು. ಅದರಿಂದ ಅಂಬೇಡ್ಕರ್ ಅವರಿಗೂ ಗೌರವ ಕೊಟ್ಟಂತೆ ಆಗುತ್ತದೆ. ಕೈ ಮುಗಿದು ಒಳಗೆ ಬಾ ಅನ್ನೋದು ನಮ್ಮ ಸಂಪ್ರದಾಯ. ಹೊರದೇಶಗಳಲ್ಲೂ ಈ ಸಂಪ್ರದಾಯ ಪಾಲಿಸುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.