ಯಲಬುರ್ಗಾ: ದೇವರಿಗೆ ಬಿಟ್ಟಿದ್ದ ಗೋವಿನ ಕಾಲನ್ನು ಪಾಪಿಗಳು ಕೊಡಲಿಯಿಂದ ಕಡಿದು ವಿಕೃತಿ ಮೆರೆದ ಘಟನೆ ತಾಲ್ಲೂಕಿನ ಮಾಟರಂಗಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗೋವನ್ನು ಮಾಟರಂಗಿ ಗ್ರಾಮದ ಮಾರುತೇಶ್ವರ ದೇವರಿಗೆ ಹದಿನೈದು ವರ್ಷಗಳ ಹಿಂದೆ ಬಿಡಲಾಗಿತ್ತು. ಇನ್ನೂ ಗ್ರಾಮಸ್ಥರು ಇದನ್ನು ಪೂಜನೀಯ ಭಾವನೆಯಿಂದ ಕಾಣುತ್ತಿದ್ದರು.
ಆದರೆ ರವಿವಾರ ಈ ಗೋವು ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಹಡಪದ ಎನ್ನುವವರ ಜಮೀನಿನಲ್ಲಿ ಮೇಯಲು ಹೋಗಿತ್ತು. ಈ ಸಂದರ್ಭದಲ್ಲಿ ಕೊಡಲಿಯಿಂದ ಗೋವಿನ ಕಾಲನ್ನು ಕಡಿಯಲಾಗಿದೆ.
ಇನ್ನೂ ಭಾರೀ ಆಕ್ರೋಶಕ್ಕೆ ಕಾರಣರಾಗಿರುವ ಈ ಘಟನೆ ಸಂಬಂಧ ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ. ದೇವರ ಹೆಸರಿನಲ್ಲಿ ಬಿಟ್ಟಿದ್ದ ಗೋವಿನ ಕಾಲನ್ನು ಕಡಿದಿರುವ ಆರೋಪವನ್ನು ಜಮೀನಿನ ಮಾಲೀಕರಾದ ಲಿಂಗನಬಂಡಿ ರಮೇಶ್ ಅವರ ಮೇಲೆ ಗ್ರಾಮಸ್ಥರು ಹೊರಿಸಿದ್ದಾರೆ.
ದೂರು: ಯಲಬುರ್ಗಾ ಪೋಲಿಸ್ ಠಾಣೆಗೆ ತೆರಳಿ ಗ್ರಾಮಸ್ಥರು ದೂರು ನೀಡಿದ್ದಾರೆ, ದೂರು ನೀಡಲು ಬಂದಾಗ ವಿಳಂಬ ಮಾಡುತ್ತಿದ್ದಾರೆ, ಪ್ರತ್ಯಕ್ಷದರ್ಶಿ ಸಾಕ್ಷಿ ಕೊಡಿ ಎಂದು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಮಾಟರಂಗಿ ಗ್ರಾಮಸ್ಥರು ಪೋಲಿಸರ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.