Publish Date: Fri, 05 Aug 2022 (12:44 IST)
Updated Date: Fri, 05 Aug 2022 (12:46 IST)
ಬೆಂಗಳೂರು : ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಪುತ್ರಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸಂಪಂಗಿ ರಾಮನಗರದ ಅದ್ವೈತ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಜೀತಿ ಎಂದು ಗುರುತಿಸಲಾಗಿದೆ.
ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾಯಿಯ ಈ ಅಮಾನವೀಯ ಕೃತ್ಯಕ್ಕೆ ಜನ ಕೆಂಡಾಮಂಡಲರಾಗಿದ್ದಾರೆ.
ಆರೋಪಿ ತಾಯಿ ಸುಷ್ಮಾ ಇತ್ತೀಚೆಗಷ್ಟೇ ಗಂಡನನ್ನು ಕಳೆದುಕೊಂಡಿದ್ದಳು. ಅನಾರೋಗ್ಯದಿಂದ ಪತಿ ತೀರಿಕೊಂಡಿದ್ದರು. ಇತ್ತ ಮಗಳು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾಳೆ ಎಂದು ಸುಷ್ಮಾ ಈ ಕೃತ್ಯ ಎಸಗಿದ್ದಾಳೆ. ಮೇಲಿಂದ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.
ಮಗುವನ್ನು ಮೇಲಿಂದ ಬಿಸಾಕಿದ ಬಳಿಕ ಸುಷ್ಮಾ ತಾನೂ ಆತ್ಮಹತ್ಯೆ ಮಡಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಅಕ್ಕಪಕ್ಕದ ಮನೆಯವರು ಬಂದು ಆಕೆಯನು ರಕ್ಷಣೆ ಮಾಡಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ.
ಸುಷ್ಮಾ ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ಈ ವೇಳೆ ಪತಿ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಇದೀಗ ಮತ್ತೆ ಮಗುವನ್ನು ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಆಕೆ ಬಚಾವ್ ಆಗಿದ್ದಾಳೆ.
ದಂತ ವೈದ್ಯೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ಸುಷ್ಮಾ ಪತಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ತಾಯಿ ಸುಷ್ಮಾ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.