Publish Date: Fri, 12 Jun 2026 (15:37 IST)
Updated Date: Fri, 12 Jun 2026 (15:40 IST)
ಬೆಂಗಳೂರು: ಆರು ವರ್ಷದ ವೆನ್ನೆಲಾಳ ಕೊಲೆ ಪ್ರಕರಣ ಸಂಬಂಧ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮೂವರು ಪೊಲೀಸರನ್ನು ಅಮಾನತು ಮಾಡುವಂತೆ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಶುಕ್ರವಾರ ಆದೇಶ ನೀಡಿದ್ದಾರೆ.
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 24ರಂದು ಆರು ವರ್ಷದ ಹೆಣ್ಣು ಮಗು ವೆನ್ನೆಲಾಳ ಕೊಲೆ ನಡೆದಿತ್ತು.
ಇನ್ನೂ ತನಿಖೆಯಲ್ಲಿ ಲೋಪ ಎಸಗಿದ ಸಂಬಂಧ ಕಾಡುಗೋಡಿ ಠಾಣೆ ಇನ್ಸ್ಪೆಕ್ಟರ್ ರಂಗಸ್ವಾಮಿ, ಪಿಎಸ್ ಐ ನಿಂಗರಾಜು ಹಾಗೂ ಕಾನ್ಸ್ಟೆಬಲ್ ಹಾಲೇಶ್ ನಾಯ್ಕ್ ಅಮಾನತುಗೊಂಡವರು.
ಈ ಸಂಬಂಧ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಕಮಿಷನರ್ ಅವರು, ಮರಣೋತ್ತರ ಪರೀಕ್ಷೆಯ ವರದಿ ಬಂದು ಎರಡು ತಿಂಗಳು ಕಳೆದರೂ ಮಗುವಿನ ತಾಯಿ, ಆರೋಪಿ ಪ್ರಿಯಾಂಕಾ ಹಾಗೂ ಅವರ ಪ್ರಿಯಕರ ಮೋಹನ್ ಅವರ ವಿರುದ್ಧ ಪ್ರಕರಣ ದಾಖಲು ಮಾಡದೇ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಹೇಳಿದರು.
ತಲೆಮರೆಸಿಕೊಂಡಿದ್ದ ಪ್ರಿಯಾಂಕಾ ಅವರನ್ನು ಹಾಸನ ಜಿಲ್ಲೆ ಸಕಲೇಶಪುರದ ರೆಸಾರ್ಟ್ನಲ್ಲಿ ವಿಶೇಷ ತಂಡವು ಅರೆಸ್ಟ್ ಮಾಡಿದೆ.
ಆರಂಭದಲ್ಲಿ ಬಾಲಕಿಯದ್ದು ಸಹಜ ಸಾವು ಎಂದೇ ಆರೋಪಿಗಳು ಬಿಂಬಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಮಗುವಿಗೆ ಒದ್ದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿತ್ತು.
ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಿಯಾಂಕಾ ಹಾಗೂ ಅವರ ಪ್ರಿಯಕರ ಮೋಹನ್ ಸಂಚು ರೂಪಿಸಿರುವುದು ತನಿಖೆಯ ವೇಳೆ ಕಂಡುಬಂದಿತ್ತು. ಮಾರ್ಚ್ 24ರಂದು ಕೋಲಾರ ಬಳಿ ಕಾಫಿ ಡೇಗೆ ಇಬ್ಬರೂ ಕಾರಿನಲ್ಲಿ ತೆರಳಿದ್ದರು. ಮಗುವನ್ನೂ ಜೊತೆಯಲ್ಲಿ ಕರೆದೊಯ್ದಿದ್ದರು ಸಿಕ್ಕಿರುವ ಮೂಲಗಳಿಂದ ತಿಳಿದುಬಂದಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ