ಶಿವಮೊಗ್ಗ: ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಲ್ಹಾದ್ ಜೋಶಿ ಉದ್ಘಾಟಿಸಲಿರುವ ಸಿಗಂದೂರು ಸೇತುವೆಯ ವಿಹಂಗಮ ವಿಡಿಯೋ ಇಲ್ಲಿದೆ ನೋಡಿ.
ಇದು ದೇಶದ 2 ನೇ ಅತೀ ಉದ್ದ ಕೇಬಲ್ ಸೇತುವೆಯಾಗಲಿದೆ. ಇದರಿಂದ ಸಾಗರ, ಸಿಗಂದೂರು ಸುತ್ತಮುತ್ತಲ ಪ್ರದೇಶದ ಜನರ ಬಹುದಿನಗಳ ಕನಸು ನನಸಾಗಲಿದೆ. ಇಷ್ಟು ದಿನ ಶರಾವತಿ ಹಿನ್ನೀರನ್ನು ದಾಟಿ ಸಿಗಂದೂರು ಚೌಢೇಶ್ವರಿ ದೇವಾಲಯಕ್ಕೆ ಲಾಂಚ್ ಮೂಲಕವೇ ತೆರಳಬೇಕಿತ್ತು.
ಆದರೆ ಇದೀಗ ಆ ತಲೆನೋವು ಇರಲ್ಲ. ಸಾಗರ-ಸಿಗಂದೂರು ನಡುವೆ ಪ್ರಯಾಣಿಸುವ ಜನರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಲಾಂಚ್ ಮೂಲಕ ಪ್ರಯಾಣಿಸಲು ಕೇವಲ ಹಗಲು ಮಾತ್ರ ಅವಕಾಶವಿತ್ತು. ರಾತ್ರಿಯಾದರೆ ಸುತ್ತು ಬಳಸಿ ಈ ಎರಡೂ ನಗರಗಳ ನಡುವೆ ಸಂಚಾರ ಮಾಡಬೇಕಿತ್ತು. ಆದರೆ ಈಗ ನಿರಾತಂಕವಾಗಿ ಬಸ್ ಹಾಗೂ ಇತರೆ ವಾಹನಗಳ ಮೂಲಕ ಎರಡೂ ನಗರಗಳನ್ನು ಸಂಪರ್ಕಿಸಬಹುದಾಗಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ. ಒಟ್ಟು 2.44 ಕಿ.ಮೀ. ಸಿಗಂದೂರು ಸೇತುವೆಯ ಒಟ್ಟು ಉದ್ದವಾಗಿದೆ. ಇದನ್ನು ನಿರ್ಮಿಸಲು ಬರೋಬ್ಬರಿ 473 ಕೋಟಿ ರೂ. ಖರ್ಚು ಮಾಡಲಾಗಿದೆ. 2018 ರಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ಸೇತುವೆ ಉದ್ಘಾಟನೆಯಾಗುತ್ತಿದೆ.