Publish Date: Mon, 14 Oct 2024 (11:11 IST)
Updated Date: Mon, 14 Oct 2024 (11:13 IST)
ಬೆಂಗಳೂರು: ಸವದತ್ತಿಗೆ ತೆರಳಿ ಯಲ್ಲಮ್ಮನ ಪೂಜೆ ಮಾಡಿರುವ ಸಿಎಂ ಸಿದ್ದರಾಮಯ್ಯಗೆ ನೆಟ್ಟಿಗರು ಸಂಕಟ ಬಂದಾಗ ಮಾತ್ರ ದೇವರು, ಕುಂಕುಮ ಎಲ್ಲಾ ನೆನಪಾಗುತ್ತಾ ಎಂದು ಟಾಂಗ್ ಕೊಟ್ಟಿದ್ದಾರೆ.
ಸವದತ್ತಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಬಂದಿದ್ದ ಸಿಎಂ ಸಿದ್ದರಾಮಯ್ಯ ದೇವಿಯ ಆಶೀರ್ವಾದ ಪಡೆದು ಪೂಜೆಯಲ್ಲಿ ಪಾಲ್ಗೊಂಡರು. ಈ ಫೋಟೋಗಳನ್ನು ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಪತ್ನಿ ಪಾರ್ವತಿ ಹೆಸರಿನಲ್ಲಿ ಸವದತ್ತಿ ಯಲ್ಲಮ್ಮನಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದರು.
ಇತ್ತೀಚೆಗೆ ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ದೇವಾಲಯಗಳಿಗೆ ಹೋಗುವುದು ಹೆಚ್ಚಾಗಿದೆ. ಅದರಲ್ಲೂ ಮೈಸೂರಿನ ಚಾಮುಂಡಿ ತಾಯಿ ದರ್ಶನಕ್ಕೆ ಹಲವು ಬಾರಿ ಹೋಗಿದ್ದಾರೆ. ಅಷ್ಟೇ ಅಲ್ಲದೆ, ಯಾವತ್ತೂ ಕುಂಕುಮ ಇಡಲು ನಿರಾಕರಿಸುವ ಸಿದ್ದರಾಮಯ್ಯ ಈಗ ಮರುಮಾತನಾಡದೇ ಕುಂಕುಮವಿಟ್ಟುಕೊಳ್ಳುತ್ತಿದ್ದಾರೆ.
ಇದೇ ಕಾರಣಕ್ಕೆ ನೆಟ್ಟಿಗರು ಈಗ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ನಿಮಗೆ ಸಂಕಟ ಬಂದಾಗ ಮಾತ್ರ ದೇವರು, ಕುಂಕುಮ ಎಲ್ಲಾ ನೆನಪಾಗುತ್ತಾ? ಕುಂಕುಮ, ಕೇಸರಿ ಕಂಡರೆ ಭಯ ಎನ್ನುತ್ತಿದ್ದವರು ಈಗ ಯಾಕೆ ಮೇಲಿಂದ ಮೇಲೆ ಟೆಂಪಲ್ ರನ್ ಮಾಡುತ್ತಿದ್ದೀರಿ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮೊನ್ನೆ ಚಾಮುಂಡಿ ತಾಯಿ, ಇಂದು ಯಲ್ಲಮ್ಮ. ಯಾಕೆ ಈಗ ಅನ್ಯಧರ್ಮದ ದೇವಾಲಯಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.