Publish Date: Sat, 18 Oct 2025 (10:02 IST)
Updated Date: Sat, 18 Oct 2025 (10:05 IST)
ಬೆಂಗಳೂರು: ಕರ್ನಾಟಕ ಜಾತಿಗಣತಿಯಲ್ಲಿ ಪಾಲ್ಗೊಳ್ಳದ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಏನು ಬೃಹಸ್ಪತಿಗಳಾ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದರು. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೌದು ಅವರು ಬೃಹಸ್ಪತಿಗಳೇ ನಿಮಗಿಂತ ಹೆಚ್ಚು ಕೊಡುಗೆ ಇದೆ ಅವರದ್ದು ಎಂದಿದ್ದಾರೆ.
ಸುಧಾಮೂರ್ತಿ ದಂಪತಿ ನಾವು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಹೀಗಾಗಿ ಗಣತಿಯಲ್ಲಿ ಪಾಲ್ಗೊಳ್ಳಲ್ಲ ಎಂದು ನಿರಾಕರಿಸಿದ್ದರು. ಈ ವಿಚಾರವಾಗಿ ನಿನ್ನೆ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿವೆ. ಇದಕ್ಕೆ ಸಿಎಂ ಅವರೇನು ಬೃಹಸ್ಪತಿಗಳಾ ಎಂದು ವ್ಯಂಗ್ಯ ಮಾಡಿದ್ದರು.
ಸಿದ್ದರಾಮಯ್ಯ ಕಾಮೆಂಟ್ ಗೆ ಈಗ ನೆಟ್ಟಿಗರು ಕಿಡಿ ಕಾರಿದ್ದಾರೆ. ಈಗಾಗಲೇ ಕಿರಣ್ ಮಜುಂದಾರ್ ಶಾ ಜೊತೆಗೆ ವಾಕ್ಸಮರ ನಡೆಸಿದ್ದೀರಿ. ಗೂಗಲ್ ಎಐ ಹಬ್ ಆಂಧ್ರ ಪಾಲಾಗಿದೆ. ಈಗ ಇನ್ಫೋಸಿಸ್ ನ್ನೂ ಕರ್ನಾಟಕದಿಂದ ಓಡಿಸಬೇಕೆಂದಿದ್ದೀರಾ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಮತ್ತೆ ಕೆಲವರು ಹೌದು, ಅವರು ಬೃಹಸ್ಪತಿಗಳೇ ಯಾಕೆಂದರೆ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಸಮಾಜ ಸೇವೆ ಮಾಡಿದ್ದಾರೆ. ಬಿಟ್ಟಿ ಭಾಗ್ಯ ಕೊಟ್ಟು ನಾನು ಕೊಟ್ಟೆ ಎಂದು ಹೇಳಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಕೋರ್ಟ್ ಕಡ್ಡಾಯವಾಗಿ ಭಾಗವಹಿಸಬೇಕಾಗಿಲ್ಲ ಎಂದಿದ್ದಾರೆ. ಹೀಗಿರುವಾಗ ನೀವು ಈ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.