Publish Date: Wed, 18 Sep 2019 (14:19 IST)
Updated Date: Wed, 18 Sep 2019 (14:20 IST)
ಮಂಡ್ಯ : ಹೆಚ್ ಡಿ ಕುಮಾರಸ್ವಾಮಿಯ ಮೇಲೆ ಆರೋಪ ಮಾಡಿದ ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಚಿವ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಯಾವ ಪಕ್ಷ ಎಂದು ಹೇಳಬೇಕು. ಹಗಲು ಸಿದ್ದರಾಮಯ್ಯ ಅವರ ಪಕ್ಕ ಕುಳಿತುಕೊಂಡು ಯಡಿಯೂರಪ್ಪ ಅವರನ್ನು ಬೈಯುತ್ತಾರೆ. ರಾತ್ರಿ ಯಡಿಯೂರಪ್ಪ ಅವರ ಜೊತೆ ಕೂತು ಊಟ ಮಾಡುತ್ತಾರೆ. ಚಲುವರಾಯಸ್ವಾಮಿ ಮೊದಲು ಯಾವ ಪಕ್ಷ ಎಂದು ಗುರುತಿಸಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ದೇವೇಗೌಡರು ಮತ್ತು ಅವರ ಮಕ್ಕಳ ಮೇಲೆ ದ್ವೇಷ ಮಾಡಿದವರು ಮನೆಗೆ ಹೋಗಿದ್ದಾರೆ. ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕೇ ಹೊರತು, ಎಂಜಲು ಎಲೆ ಆಗಬಾರದು. ರಾಜಕೀಯವಾಗಿ ಬೆಳೆಯಬೇಕೆಂದರೆ ಬೆಳೆಯಲಿ. ನನ್ನ ರಾಜಕೀಯ ಇತಿಹಾಸದಲ್ಲಿ ನಾನು ಕುದುರೆಯ ಮೇಲೆ ಇದ್ದೇನೆ. ಜನರೊಟ್ಟಿಗೆ ನಿಂತು ಕೆಲಸ ಮಾಡುತ್ತೀದ್ದೇನೆ. ನಾನು ಮೊದಲಿನಿಂದ ಹೇಗೆ ಇದ್ದೇನೋ ಈಗಲೂ ಹಾಗೇ ಇದ್ದೇನೆ ಎಂದು ಅವರು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.