Publish Date: Fri, 29 Aug 2025 (12:12 IST)
Updated Date: Fri, 29 Aug 2025 (12:22 IST)
ಬೆಂಗಳೂರು: ಕೃಷಿ ಸಚಿವ ಶಿವಾನಂದ ಪಾಟೀಲ್ ಈಗ ತಮ್ಮದೇ ಸರ್ಕಾರವನ್ನು ಬೈದು ಕುಮಾರಸ್ವಾಮಿಯವರನ್ನು ಹೊಗಳಿ ಸುದ್ದಿಯಲ್ಲಿದ್ದಾರೆ. ಅವರನ್ನು ಸುಮ್ನೇ ಬಿಡುತ್ತಾ ಹೈಕಮಾಂಡ್ ಎನ್ನುವುದೇ ಈಗಿರುವ ಪ್ರಶ್ನೆ.
ಮೊನ್ನೆಯಷ್ಟೇ ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನದ ವಿರುದ್ಧ ಮಾತನಾಡಿದ್ದಕ್ಕೆ ಹಿರಿಯ ನಾಯಕ ಎನ್ನುವುದನ್ನೂ ನೋಡದೇ ಕೆಎನ್ ರಾಜಣ್ಣ ಅವರನ್ನು ಪದಚ್ಯುತಗೊಳಿಸಲಾಗಿತ್ತು. ರಾಹುಲ್ ಗಾಂಧಿಯೇ ಖುದ್ದಾಗಿ ಅವರ ಪದಚ್ಯುತಿಗೆ ಸೂಚಿಸಿದ್ದರು.
ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಬಹಿರಂಗವಾಗಿ ನಾಲಿಗೆ ಹರಿಬಿಡುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಖಡಕ್ ಸಂದೇಶ ರವಾನಿಸಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕರು ನಾಲಿಗೆ ಹರಿಬಿಡುವುದು ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಶಿವಾನಂದ ಪಾಟೀಲ್ ಅದೇ ತಪ್ಪು ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ್ದ ಶಿವಾನಂದ ಪಾಟೀಲ್ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ. ವಿಶೇಷವೆಂದರೆ ಅವರು ಇದೇ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದಾಗ ಕುಮಾರಸ್ವಾಮಿಯವರು ನಮ್ಮ ಜಿಲ್ಲೆಗೆ ಅನುಕೂಲ ಮಾಡಿದ್ದರು ಎಂದು ಹೊಗಳಿದ್ದರು.