Publish Date: Sat, 27 Jul 2024 (13:09 IST)
Updated Date: Sat, 27 Jul 2024 (13:11 IST)
ಅಂಕೋಲಾ: ಶಿರೂರಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ನಿಜವಾದ ಕಾರಣವೇನು ಎಂಬುದನ್ನು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಹೆದ್ದಾರಿ ಪ್ರಾಧಿಕಾರದ ವಾದವನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ.
ಶಿರೂರಿನಲ್ಲಿ ಗುಡ್ಡ ಕುಸಿತವಾದ ಕಾರಣ ಹಲವರು ಸಾವನ್ನಪ್ಪಿದ್ದಲ್ಲದೆ, ಜನವಸತಿ ಪ್ರದೇಶ ನಿರ್ನಾಮವಾಗಿತ್ತು. ಈಗಲೂ ಕೇರಳದ ಲಾರಿ ಡ್ರೈವರ್ ಅರ್ಜುನ್ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಸಂಸತ್ ನಲ್ಲೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಘಟನೆ ಬಗ್ಗೆ ಮಾತನಾಡಿದ್ದರು.
ಈ ಘಟನೆಗೆ ಪ್ರಾಕೃತಿಕ ವಿಕೋಪ ಕಾರಣವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳುತ್ತಿತ್ತು. ಆದರೆ ಇದೀಗ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಪ್ರಾಕೃತಿಕ ವಿಕೋಪ ಇದಕ್ಕೆ ಕಾರಣವಲ್ಲ. ಬದಲಾಗಿ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಘಟನೆಗೆ ಕಾರಣ ಎಂದು ಸರ್ಕಾರಕ್ಕೆ ವರದಿ ನೀಡಿದೆ.
ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಪ್ರಾಕೃತಿಕವಾಗಿರುವ ಒಳಚರಂಡಿ ನೀರಿನ ವ್ಯವಸ್ಥೆಗೆ ತೊಂದರೆಯಾಗಿದೆ. ಇದರಿಂದಾಗಿ ಇಳಿಜಾರು ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪದಿಂದ ತೊಂದರೆ ಉಂಟಾಗಿ ಘಟನೆ ಸಂಭವಿಸಿದೆ ಎಂದು ವರದಿ ನೀಡಿದೆ. ಜೊತೆಗೆ ಈ ಸಂದರ್ಭದಲ್ಲಿ ಭಾರೀ ಮಳೆಯಾಗಿರುವುದು ಘಟನೆ ನಡೆಯಲು ಕಾರಣವಾಯಿತು ಎಂದಿದೆ. ಈ ವರದಿಯಿಂದ ಈಗ ಅವೈಜ್ಞಾನಿಕವಾಗಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಬಂದಿದೆ.