Publish Date: Mon, 23 Jul 2018 (15:13 IST)
Updated Date: Mon, 23 Jul 2018 (15:16 IST)
ತೃತೀಯರಂಗದಲ್ಲಿ ಅವರಲ್ಲೇ ಒಗ್ಗಟ್ಟಿಲ್ಲ. ತೃತೀಯರಂಗ ನಾಯಕತ್ವಕ್ಕೆ ಯಾರೂ ಒಪ್ಪಿಕೊಳ್ಳುವುದಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುವುದು ಖಚಿತ ಎಂದು ಬಿಜೆಪಿಯ ಮುಖಂಡ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯಾಗಿ ಮಾಡಲು ಸಾಧ್ಯವಿಲ್ಲ. ರಾಹುಲ್ ಅವರನ್ನ ಪ್ರಧಾನಿಯಾಗಿ ಮಾಡಲಿದ್ದೇವೆ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಲಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧೀ ಪ್ರಧಾನಿಯಾಗುವ ಕನಸು ಯಶಸ್ವಿಯಾಗಲು ಸಾಧ್ಯವಿಲ್ಲ. ಮೋದಿಯವರ ನಡೆ ಹಾಗೂ ಅವರ ಅಭಿವೃದ್ದಿಯೇ ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ. ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ.
ಬಜೆಟ್ ಪ್ರತಿ ಬಿಡುಗಡೆ ಮಾಡಲಿ:
ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಬಜೆಟ್ ನಲ್ಲಿ 55 ಸಾವಿರ ಕೋಟಿ ಬಿಡುಗಡೆ ಮಾಡಿರುವುದನ್ನು ಅಂಕಿಸಂಖ್ಯೆಯ ಮೂಲಕ ಸ್ಪಷ್ಟಪಡಿಸಲಿ.
ಯಾವ ಯಾವ ಇಲಾಖೆಗೆ ಬಿಡುಗಡೆ ಮಾಡಿದ್ದಾರೆ ಎಂಬುದನ್ನ ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿಗಳು ಬಜೆಟ್ ನ ಪ್ರತಿ ಶೀಘ್ರವೇ ಬಿಡುಗಡೆ ಮಾಡಲಿ.
ಬಜೆಟ್ ಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿರುವುದರಲ್ಲಿ ಅರ್ಥವೇ ಇಲ್ಲ. ರಾಜ್ಯದ 50 ಹೊಸ ತಾಲೂಕುಗಳಲ್ಲಿ 38 ತಾಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಪ್ರತಿ ತಾಲೂಕಿಗೆ ಕನಿಷ್ಟ 5 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಆಗ್ರಹಿಸಿದ್ದಾರೆ.