Publish Date: Mon, 03 Dec 2018 (14:15 IST)
Updated Date: Mon, 03 Dec 2018 (14:18 IST)
ಜನರಿಗೆ ಕಡಿಮೆ ದರದಲ್ಲಿ ಮರಳು ಕೊಡಿಸಿಯೇ ಸಿದ್ದ ಎಂದು ಕಳೆದು ಆರು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಬಿಜೆಪಿ ಶಾಸಕ ಅಸ್ವಸ್ಥಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಅಸ್ವಸ್ಥರಾಗಿದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರು ದಿನಗಳಿಂದ ಹೊನ್ನಾಳಿ ಪಟ್ಟಣದಲ್ಲಿ ಶಾಸಕ ರೇಣುಕಾಚಾರ್ಯ ಧರಣಿ ನಡೆಸುತ್ತಿದ್ದಾರೆ. ಕಾನೂನುಬಾಹಿರವಾಗಿ ನದಿಗೆ ಇಳಿದು ಮರಳು ತುಂಬಿ ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಸೆಡ್ಡು ಹೊಡೆದಿದ್ದರು. ನಂತರ ಹೊನ್ನಾಳಿ ಪಟ್ಟಣದಲ್ಲಿ ಮೊದಲು ಎರಡು ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದ ರೇಣುಕಾಚಾರ್ಯ, ಬಿಜೆಪಿ ನಾಯಕರ ಒತ್ತಾಯದ ಮೇರೆಗೆ ಉಪವಾಸ ಕೈ ಬಿಟ್ಟಿದ್ದರು. ಬಳಿಕ ನ್ಯಾಮತಿ ತಾಲ್ಲೂಕನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಶಾಸಕ ರೇಣುಕಾಚಾರ್ಯ ರಿಗೆ ಶುಗರ್ ಹಾಗೂ ರಕ್ತದೊತ್ತಡ ಖಾಯಿಲೆ ಇರುವ ಹಿನ್ನಲೆ ಬಳಲಿಕೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ಬೇಡಿಕೆ ಈಡೇರಿಕೆ ಆಗುವವರೆಗು ಪ್ರತಿಭಟನೆಗೆ ಕರೆ ನೀಡಿರುವ ರೇಣುಕಾಚಾರ್ಯ ಹೊನ್ನಾಳಿ ತಾಲ್ಲೂಕು ಬಂದ್ ಗೆ ಕರೆ ಕೊಟ್ಟಿದ್ದಾರೆ.