Publish Date: Wed, 08 Mar 2023 (13:16 IST)
Updated Date: Wed, 08 Mar 2023 (13:19 IST)
ದೇವಸ್ಥಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಸಂಬಂಧ ಕಳೆದ ವರ್ಷ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೇ ತಿಂಗಳು ಮಾರ್ಚ್ 22 ರಿಂದ ರಂಜಾನ್ ಪ್ರಾರಂಭವಾಗುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮಸೀದಿಗಳಲ್ಲಿ ನಸುಕಿನ ಜಾವ 5 ರಿಂದ 5:30 ವರೆಗು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕ ಸಿ.ಟಿ ರವಿಯವರಿಗೆ ಮನವಿ ಮಾಡಿದ್ದಾರೆ. ಮುಸಲ್ಮಾನ್ ಬಾಂಧವರಿಗೆ ರಂಜಾನ್ ಮಾಸವು ಬಹಳ ಪವಿತ್ರ ಮಾಸವಾಗಿರುತ್ತದೆ. ಶಾಂತಿ, ಸಹಬಾಳ್ವೆ, ದಾನ ಧರ್ಮ ಉಪವಾಸದೊಂದಿಗೆ ಕಟ್ಟುನಿಟ್ಟಾಗಿ ಪ್ರಾರ್ಥನೆಗಳು ರಂಜಾನ್ ಮಾಸದಲ್ಲಿ ನಡೆಯುತ್ತವೆ, ಇದರ ಜೊತೆಗೆ ಮುಸಲ್ಮಾನ್ ಬಾಂಧವರಿಗೆ ಆಝಾನ್ ಕೂಡ ರಂಜಾನ್ ಆಚರಣೆಯ ಒಂದು ಭಾಗವಾಗಿರುತ್ತದೆ. ವಿಶೇಷ ಸಂದರ್ಭಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ, ಕ್ರೀಡಾಕೂಟಗಳಿಗೆ ರಾತ್ರಿ ಹಾಗೂ ಮುಂಜಾನೆ ಧ್ವನಿ ವರ್ಧಕವನ್ನು ಬಳಸಲು ಅನುಮತಿ ನೀಡುತ್ತಿದ್ದೀರಿ, ಇದೇ ರೀತಿ ಮುಸಲ್ಮಾನರ ಪವಿತ್ರ ರಂಜಾನ್ ಮಾಸದಲ್ಲಿ ಬೆಳಗಿನ ಜಾವ 5-00 ರಿಂದ 5-30 ರ ಒಳಗೆ ಗರಿಷ್ಠ 5 ನಿಮಿಷಗಳ ಕಾಲ ಧ್ವನಿವರ್ಧಕದ ಮೂಲಕ ಆಝಾನ್ ನೀಡಲು ಅನುಮತಿ ನೀಡಬೇಕೆಂದು ಕೋರಿಕೊಳ್ಳುತ್ತೇವೆ ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ.