Publish Date: Tue, 06 Jul 2021 (13:58 IST)
Updated Date: Tue, 06 Jul 2021 (14:02 IST)
ಕರ್ನಾಟಕದ ನೂತನ ರಾಜ್ಯಪಾಲರಾಗಿ ಮಾಜಿ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.
ವಿ.ಆರ್. ವಾಜೂಭಾಯ್ ವಾಲಾ ಅವರ ಅಧಿಕಾರ ಅವಧಿ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 8 ರಾಜ್ಯಗಳ ರಾಜ್ಯಪಾಲರ ನೇಮಕ ಮಾಡಲಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ 8 ರಾಜ್ಯಪಾಲರ ನೇಮಕ ಆದೇಶ ಹೊರಡಿಸಿದ್ದು, ಮಿಜೊರಾಂ ರಾಜ್ಯಪಾಲರಾಗಿದ್ದ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಗೋವಾಕ್ಕೆ ಸ್ಥಳಾಂತರ ಮಾಡಲಾಗಿದೆ.
ಹರಿಯಾಣದ ರಾಜ್ಯಪಾಲರಾಗಿದ್ದ ಸತ್ಯದೇವ್ ನಾರಾಯಣ ಆರ್ಯ ಅವರನ್ನು ತ್ರಿಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬಮದ್ರು ದತ್ತಾತ್ರೇಯ ಅವರನ್ನು ಹರಿಯಾಣಕ್ಕೆ ವರ್ಗ ಮಾಡಲಾಗಿದೆ. ಹರಿಬಾಬು ಕಂಬಪಟಿ ಅವರನ್ನು ಮಿಜೊರಾಂ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
ಮಂಗುಭಾಯ್ ಚನ್ನಂಗಡಿ ಭಾಯ್ ಪಟೇಲ್ ಅವರನ್ನು ಮಧ್ಯಪ್ರದೇಶಕ್ಕೆ ಹಾಗೂ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ಹಿಮಾಚಲ ಪ್ರದೇಶಕ್ಕೆ ನೇಮಕ ಮಾಡಲಾಗಿದ್ದು, ಅವರು ಯಾವಾಗ ಅಧಿಕಾರ ಸ್ವೀಕರಿಸುತ್ತಾರೋ ಅಂದಿನಿಂದ ನೇಮಕ ಆದೇಶ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.