Publish Date: Sun, 21 Jul 2024 (15:47 IST)
Updated Date: Sun, 21 Jul 2024 (15:52 IST)
ಬೆಂಗಳೂರು: ಕರ್ತವ್ಯದ ವೇಳೆ ಸರ್ಕಾರಿ ಬಸ್ ಚಾಲಕರು, ನಿರ್ವಾಹಕರು ರೀಲ್ಸ್ ಮಾಡಿದ್ದಲ್ಲಿ ಅಂತವರನ್ನು ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ತವ್ಯದ ವೇಳೆ ರೀಲ್ಸ್ ಮಾಡುವವರು ಈ ಕೆಲಸದಲ್ಲಿ ಇರಲು ಅನರ್ಹರು. ಹುಚ್ಚಾಟದಲ್ಲಿ ರೀಲ್ಸ್ ಮಾಡುವವರನ್ನು ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಹೇಳಿದರು.
ಈಚೆಗೆ ಸರ್ಕಾರಿ ಬಸ್ ಚಾಲಕರು ಮತ್ತು ನಿರ್ವಾಹಕರು ಹೆಚ್ಚಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಈಚೆಗೆ ಬಸ್ ಒಳಗೆ ಕೊಡೆ ಹಿಡಿದುಕೊಂಡು ಕೆಎಸ್ಆರ್'ಟಿಸಿ ಬಸ್ ಚಾಲಯಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನೊಂದು ಘಟನೆಯಲ್ಲಿ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ನಲ್ಲಿ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಸಾವನ್ನಪ್ಪಿದವು. ರೀಲ್ಸ್ಗೆ ಪೋಸ್ ನೀಡಲು ಹೋದ ಬಸ್ ಚಾಲಕ ಎರಡು ಎತ್ತುಗಳಿಗೆ ಡಿಕ್ಕಿ ಮಾಡಿದ್ದ. ಅಪಘಾತದ ರಭಸಕ್ಕೆ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. ರೈತ ಮಂಜುನಾಥ್ ಎಂಬುವವರ ಮೆದುಳು ನಿಷ್ಕ್ರಿಯವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.