Publish Date: Sat, 12 Oct 2024 (10:20 IST)
Updated Date: Sat, 12 Oct 2024 (10:25 IST)
ಬೆಂಗಳೂರು: ಕಾಂಗ್ರೆಸ್ ಶಾಸಕನಾಗಿದ್ದುಕೊಂಡು ರೈತರಿಗೆ ಅನುದಾನ ಮಾಡಿಕೊಡಲಾಗುತ್ತಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ ಕಾಂಗ್ರೆಸ್ ಶಾಸಕ ರಾಜು ಕಾಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಜ್ಯ ಬಿಜೆಪಿ ಘಟಕ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪವಿದೆ. ಅದಕ್ಕೆ ತಕ್ಕಂತೆ ಇದೀಗ ರಾಜು ಕಾಗೆ ಕೂಡಾ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಆಡಳಿತ ಪಕ್ಷದ ಶಾಸಕನಾಗಿಯೇ ಹೀಗೆ ಹೇಳುತ್ತಿದ್ದೇನೆ. ನಮಗೆ ಅನ್ನ ಒದಗಿಸುವ ನಿಮಗೆ ಅನುಕೂಲ ಮಾಡಿಕೊಡದ ಮೇಲೆ ನಾವು ಬದುಕಿದ್ದು ಏನು ಪ್ರಯೋಜನ ಎಂದಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಆಡಳಿತ ಪಕ್ಷದ ಶಾಸಕನೇ ಆತ್ಮಹತ್ಯೆ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲು. ಇದಕ್ಕೆ ಮೊದಲು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ವರದಿ ನೋಡುತ್ತಿದ್ದೆವು. ಈಗ ಸರ್ಕಾರದ ಶಾಸಕನೇ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಮಾತನಾಡುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ. ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳದೇ ಸರಣಿ ಭ್ರಷ್ಟಾಚಾರಗಳನ್ನು ಹೇಗೆ ನಡೆಸಬಹುದು ಎಂಬುದನ್ನು ಕಾಂಗ್ರೆಸ್ ಕರಗತ ಮಾಡಿಕೊಂಡಿದೆ. ಅನೈತಿಕ ಮತ್ತು ಅರಾಜಕತೆಯ ನಡುವೆ ರಾಜ್ಯ ಸರ್ಕಾರ ಸಿಲುಕಿಕೊಂಡಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.