Publish Date: Fri, 11 Oct 2024 (11:50 IST)
Updated Date: Fri, 11 Oct 2024 (11:53 IST)
ಬೆಂಗಳೂರು: ನವಂಬರ್ 1 ರಾಜ್ಯೋತ್ಸವದಂದು ಐಟಿ-ಬಿಟಿಯವರೂ ಕನ್ನಡದ ಬಾವುಟ ಹಾರಿಸಲೇಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ನಿಯಮ ಘೋಷಣೆ ಮಾಡಿದ್ದಾರೆ.
ಮೈಸೂರು ಕರ್ನಾಟಕ ರಾಜ್ಯ ಎಂದು ಘೋಷಣೆಯಾಗಿ ನವಂಬರ್ 1 ಕ್ಕೆ 50 ವರ್ಷವಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ರಾಜ್ಯೋತ್ಸವ ವಿಶೇಷವಾಗಿರಲಿದೆ. ಈ ಕಾರಣಕ್ಕೆ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರೂ ಆಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಿಕೆಶಿ ಐಟಿ-ಬಿಟಿಯವರಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಹಲವು ಅಂತರಾಷ್ಟ್ರೀಯ ಮತ್ತು ಅಂತರ್ ರಾಜ್ಯದ ಸಂಸ್ಥೆಗಳೂ ಇವೆ. ಇವರೆಲ್ಲರೂ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೊರಗಿನಿಂದ ಬಂದವರು ಕನ್ನಡ ಕಲಿಯಬೇಕು. ಇಲ್ಲಿನ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಬೇಕು ಎಂದು ಡಿಸಿಎಂ ಹೇಳಿದ್ದಾರೆ.
ರಾಷ್ಟ್ರಧ್ವಜದಂತೆ ನಾಡಧ್ವಜಕ್ಕೂ ಗೌರವ ಕೊಡಬೇಕು. ಇದನ್ನು ಎಲ್ಲರೂ ಪಾಲಿಸಲೇಬೇಕು. ಹಾಗಂತ ಯಾವ ಕನ್ನಡ ಸಂಘಟನೆಗಳೂ ಕನ್ನಡ ರಾಜ್ಯೋತ್ಸವ ಆಚರಿಸಲು ಒತ್ತಾಯ ಮಾಡಬಾರದು. ಆದರೆ ಎಲ್ಲರೂ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸಬೇಕು ಎಂದು ಸರ್ಕಾರವೇ ಆದೇಶಿಸಿದೆ. ಇದನ್ನು ಪಾಲಿಸದವರಿಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಬಳಿಕ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದಾರೆ.