Publish Date: Fri, 19 Jan 2024 (18:32 IST)
Updated Date: Fri, 19 Jan 2024 (18:19 IST)
ತುಮಕೂರು :ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ ನಾನು ಅಯೋಧ್ಯೆಗೆ ಭೇಟಿ ನೀಡಿದ್ದೆ. ಆಗ ಅಲ್ಲಿ ಮಂದಿರ ಟೂರಿಂಗ್ ಟಾಕೀಸಿನಂತೆ ಇದ್ದಿದ್ದು ನಿಜ. ಬೊಂಬೆಯನ್ನು ಅದರಲ್ಲಿ ಇಟ್ಟಿದ್ದೂ ಸಹ ನಿಜ. ನಾನು ಅದನ್ನೇ ಹೇಳಿದ್ದೇ.ನೆ ಆ ಬೊಂಬೆಯನ್ನೇ ಟೂರಿಂಗ್ ಟಾಕೀಸ್ ಎಂದು ಹೇಳಿಲ್ಲ. ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರದಿಂದ ಮಾತನಾಡಬಾರದು. ಬೊಂಬೆಯಲ್ಲಿಯೂ ದೈವತ್ವ ಇರುತ್ತದೆ ಎಂದು ಹೇಳಿರುವ ರಾಜಣ್ಣ, ನಾವು ರೈತ ಸಮುದಾಯದವರು ಸಗಣಿ, ಕಲ್ಲು ಪ್ರತಿಯೊಂದಕ್ಕೂ ಪೂಜೆ ಮಾಡುತ್ತೇವೆ ಎಂದಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಸಮಯದಲ್ಲಿ ಅಲ್ಲಿ ಕೇವಲ ಬೊಂಬೆ ಇಡಲಾಗಿತ್ತು ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಕೆ.ಎನ್.ರಾಜಣ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಶುಕ್ರವಾರ ತುಮಕೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ನನ್ನ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ. ಈಗಲೂ ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದಿದ್ದು, ನಾನು ರಾಮ ಮತ್ತು ರಾವಣ ಇಬ್ಬರ ಪರವೂ ಇದ್ದೇನೆ ಎಂದರು.
ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ. ನನಗೇನೂ ಬೇಜಾರಿಲ್ಲ. ಈ ಹಿಂದೆ ಅಣ್ಣಾದೊರೈ ರಾವಣಾಯಣ ಅನ್ನೋ ನಾಟಕ ಮಾಡಿದ್ದರು. ಅದರಲ್ಲಿ ರಾವಣ ಸೀತೆಯ ಮೇಲೆ ಬಲಾತ್ಕಾರ ಮಾಡೋಲ್ಲ. ಇದು ರಾವಣನ ದೊಡ್ಡಗುಣ. ನಾನು ರಾಮ ಮತ್ತು ರಾವಣ ಇಬ್ಬರನ್ನೂ ಗೌರವಿಸುತ್ತೇನೆ ಎಂದು ಹೇಳಿರುವ ರಾಜಣ್ಣ, ನನ್ನ ಹೇಳಿಕೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.