Publish Date: Sun, 12 Aug 2018 (14:29 IST)
Updated Date: Sun, 12 Aug 2018 (14:33 IST)
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲು ಗಡಿ ಜಿಲ್ಲೆ ಬೀದರ್ ಗೆ ಬರುತ್ತಿದ್ದರೆ, ಇತ್ತ ಕಾರಂಜಾ ಯೋಜನೆಯಲ್ಲಿ ಹೊಲ, ಮನೆ ಕಳೆದುಕೊಂಡು ಅನಾಥರಾದ ಕಾರಂಜಾ ಸಂತ್ರಸ್ಥರು ತಮ್ಮ ನೈತಿಕ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ. ಕಳೆದ ನಾಲ್ಕು ದಶಕಗಳ ಹಿಂದೆ ಕಾರಂಜಾ ಯೋಜನೆಗಾಗಿ 29ಗ್ರಾಮಗಳ 17,500 ಏಕರೆ ಭೂಮಿಯನ್ನ ಕಳೆದುಕೊಂಡ ಜನರು, ಅದಕ್ಕಾಗಿ ಪರಿಹಾರವಾಗಿ ಎಕರೆಗೆ ಪಡೆದಿದ್ದು ಬರಿ 3ರಿಂದ 4ಸಾವಿರ ಮಾತ್ರ. ನಮ್ಮ ಭೂಮಿಗೆ ನ್ಯಾಯಯುತ ಹಣ ನೀಡಿ ಅಂತಾ ಸತ್ಯಾಗ್ರಹ ಆರಂಭಿಸಿದ್ದಾರೆ. ಸಧ್ಯಕ್ಕೆ ಸತ್ಯಾಗ್ರಹ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಈಗ ಕಾರಂಜಾ ಮುಳುಗಡೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಹೋರಾಟ ನಿದ್ದೆಗೆಡಿಸಿದೆ. ಕಳೆದ 1970ರ ದಶಕದಲ್ಲಿ ಕಾರಂಜಾ ಯೋಜನೆ ಆರಂಭವಾದಾಗ ಇದಕ್ಕಾಗಿ ತಮ್ಮದೆಲ್ಲವನ್ನ ಧಾರೆಯರೆದವರು 29ಗ್ರಾಮಗಳ ಜನರು. ಬರೋಬ್ಬರಿ 17,500 ಎಕರೆ ಭೂಮಿ ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾಯಿತು. ಆದ್ರೆ ಈ ಹೊಲ ಕಳೆದುಕೊಂಡ ಕಾರಂಜಾ ಸಂತ್ರಸ್ಥರಿಗೆ ಎಕರೆಗೆ ಸಿಕ್ಕಿದ್ದು ಬರಿ 3ರಿಂದ 4 ಸಾವಿರ ಹಣ. ತಾವು ಕಳೆದಕೊಂಡ ಭೂಮಿಗೆ ಸಮರ್ಪಕ ಪರಿಹಾರ ನೀಡಿ ಅಂತಾ ಕಾರಂಜಾ ಸಂತ್ರಸ್ಥರು ಹೋರಾಟ ಸಮಿತಿಯವರು ಇಲ್ಲಿಯರೆಗೆ ಹೋರಾಟ ಮಾಡುತ್ತಲೆ ಬಂದಿದ್ದಾರೆ.ಆದ್ರೆ ಹಣ ಮಾತ್ರ ಅವರ ಪಾಲಿಗೆ ಮರೀಚಿಕೆಯಾಗಿದೆ.
ನಾಲ್ಕು ದಶಕ ಕಳೆದ್ರು ಪರಿಹಾರ ನೀಡದ ಸರಕಾರದ ಕ್ರಮ ಖಂಡಿಸಿ ಈಗ ಮತ್ತೆ ನಿರಂತರ ಧರಣಿ ಕೈಗೊಂಡಿದ್ದಾರೆ. ಸರಕಾರ, ಜನಪ್ರತಿನಿಧಿಗಳ ವಿರುದ್ದ 29 ಗ್ರಾಮಗಳ ಜನರು ಭಾಗಿಯಾಗಿ ಸತ್ಯಾಗ್ರಹ ಆರಂಭಿಸಿದ್ದಾರೆ. ಒಂದಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ರಾಜಕಾರಣಿಗಳಿಗೆ ಈ ಹೋರಾಟದ ಬಿಸಿ ತಟ್ಟಲಾರಂಬಿಸಿದೆ.