ನವದೆಹಲಿ: ಮತಗಳ್ಳತನದ ಬಗ್ಗೆ ಇಂದು ಮತ್ತೊಂದು ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೆಲವು ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಗೆ ವೋಟ್ ಹಾಕುವವರ ಹೆಸರುಗಳನ್ನೇ ಡಿಲೀಟ್ ಮಾಡಲಾಗಿದೆ ಎಂದಿದ್ದಾರೆ.
ರಾಹುಲ್ ಇಂದು ಹೊಸದಾಗಿ ಒಂದಷ್ಟು ಮತದಾರರ ಪಟ್ಟಿಯ ದಾಖಲೆ ಬಿಡುಗಡೆ ಮಾಡಿದ್ದು ಈ ಪೈಕಿ ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರವೂ ಸೇರಿದೆ. ಕಾಂಗ್ರೆಸ್ ಮತದಾರರನ್ನೇ ಟಾರ್ಗೆಟ್ ಮಾಡಿ ಮತಪಟ್ಟಿಯಿಂದ ಹಲವು ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆಳಂದ ಕ್ಷೇತ್ರದಲ್ಲಿ ಬಿಎಲ್ಒ ಸಂಬಂಧಿಯ ಹೆಸರು ಮತದರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಆಗ ತನಿಖೆ ಆರಂಭಿಸಿದಾಗ ಪಕ್ಕದ ಮನೆಯವರು ಹೆಸರು ಡಿಲೀಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿತ್ತು. ಹಾಗಾಗಿ ಅವರಲ್ಲಿ ಹೋಗಿ ವಿಚಾರಿಸಿದಾಗ ನಾನು ಅರ್ಜಿ ಕೊಟ್ಟಿಲ್ಲ, ಯಾರ ಹೆಸರನ್ನೂ ತೆಗೆಸಿ ಹಾಕಿಲ್ಲ ಎಂದಿದ್ದಾರೆ.
ಒಬ್ಬರ ಹೆಸರು ಬಳಸಿಕೊಂಡು ಮತದಾರರ ಪಟ್ಟಿಯಿಂದ 12 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಅವರು ನಾವು ಯಾವ ಅರ್ಜಿಯನ್ನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆಳಂದದಲ್ಲಿ ಈ ರೀತಿ ಒಟ್ಟು 6018 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ.
ಇವರ ಹೆಸರುಗಳನ್ನು ತೆಗೆಸಲು ಬಳಕೆಯಾದ ಮೊಬೈಲ್ ಸಂಖ್ಯೆ, ಒಟಿಪಿ ಯಾವ ದಾಖಲೆಯೂ ಸಿಗುತ್ತಿಲ್ಲ. 18 ತಿಂಗಳ ಅವಧಿಯಲ್ಲಿ 18 ಬಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಾಹಿತಿ ಕೇಳಲಾಗಿದೆ. ಆದರೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಹೀಗಾಗಿ ಇದರಲ್ಲಿ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಕೈವಾಡವಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.