Publish Date: Tue, 24 Feb 2026 (17:11 IST)
Updated Date: Tue, 24 Feb 2026 (17:13 IST)
ಬೆಂಗಳೂರು: ಶಿವಮೊಗ್ಗದ ಸೂಳೆಬೈಲಿನಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಯನ್ನು ಅನ್ಯಕೋಮಿನ ಅಪ್ರಾಪ್ತ ಯುವಕರು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಹೊರವಲಯದ ಸೂಳೆಬೈಲಿನಲ್ಲಿ ಗಾಂಜಾ ನಶೆಯಲ್ಲಿ ಅನ್ಯಕೋಮಿನ ಮೂವರು ಅಪ್ರಾಪ್ತರು ಸಂಕೇತ್ ಎನ್ನುವ ಎಸ್ಎಸ್ಎಲ್ ಸಿ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದಾರೆ. ಸಂಕೇತ್ ಗೆಳೆಯ ಗಿರೀಶ್ ಜೊತೆ ಈ ಆರೋಪಿಗಳು ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ಆರೋಪಿಗಳು ಸಂಕೇತ್ ಎದೆಗೆ ಗುದ್ದಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್ ಶಿವಮೊಗ್ಗದ ಸೂಳೆಬೈಲಿನಲ್ಲಿ ಗಾಂಜಾ ನಶೆಯಲ್ಲಿದ್ದ ಮತಾಂಧ ಪುಂಡರು SSLC ವಿದ್ಯಾರ್ಥಿ ಸಂಕೇತ್ ನನ್ನು ಅಮಾನುಷವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ "ಬ್ರದರ್ಸ್" ಗಳಿಗೆ ಯಾವ ಮಟ್ಟದ ಸದರ ಕೊಟ್ಟಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನವಾಗಿದೆ.
'ಸರ್ವ ಜನಾಂಗದ ಶಾಂತಿಯ ತೋಟ'ದ ಕನಸು ಕಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ತವರು ಜಿಲ್ಲೆ ಇವತ್ತು ಮತಾಂಧತೆಯ ಮಸಣವಾಗಿರುವುದಕ್ಕೆ ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.