Publish Date: Fri, 20 Feb 2026 (13:42 IST)
Updated Date: Fri, 20 Feb 2026 (13:45 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನದ್ದು ಕಮಿಷನ್ ಚೋರ್ ಸರ್ಕಾರ, ಅದಕ್ಕೆ ಇರುವವರು ಕಾಮ್ ಚೋರ್ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇಎಸ್ಐ ಆಸ್ಪತ್ರೆಗಳಿಗೆ ಕಾರ್ಮಿಕ ಇಲಾಖೆ ಇದುವರೆಗೆ ಹಣ ನೀಡಿಲ್ಲ ಎಂಬ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರೇ ನಿಮ್ಮ ಸರ್ಕಾರದಲ್ಲಿ ಕಮಿಷನ್ ಚೋರ್ ಗಳು, ಕಾಮ್ ಚೋರ್ ಗಳೇ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಒಂದು ಕಡೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಣಕಾಸು ಇಲಾಖೆಯಿಂದ ₹880 ಕೋಟಿ ಅನುದಾನ ಬಿಡುಗಡೆ ಆಗಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿ ಮಾಡದೆ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ ₹143 ಕೋಟಿ ಬಾಕಿ ಬಿಲ್ ಪಾವತಿ ಮಾಡದೆ, ಸಾರ್ವಜನಿಕರು ಪರದಾಡುವಂತೆ ಮಾಡಿದ್ದಾರೆ.
ಇನ್ನೊಂದು ಕಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ESI ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡಿದ ಕಂಪನಿಗಳಿಗೆ ₹60 ಕೋಟಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡು, ರೇಟ್ ಕಾರ್ಡ್ ಆಧಾರದಲ್ಲಿ ಔಷಧಿ, ಉಪಕರಣ ಖರೀದಿ ಮಾಡುವ ಮೂಲಕ ಕಾರ್ಮಿಕರ ಹಣ ಲೂಟಿ ಹೊಡೆಯಲು ಹೊರಟಿದ್ದಾರೆ.
ಸಿಎಂ ಸಿದ್ದರಾಮಯ್ಯನನವರೇ, ಎಲ್ಲ ಇಲಾಖೆಗಳಲ್ಲೂ ಹಿಂದಿನ ವರ್ಷಗಳದ್ದೇ ಸಾವಿರಾರು ಕೋಟಿ ಬಿಲ್ ಪಾವತಿ ಬಾಕಿ ಇರುವಾಗ ಈಗ ಇನ್ನೊಂದು ಬಜೆಟ್ ಮಂಡನೆ ಮಾಡಿ ಏನು ಸಾಧಿಸಲು ಹೊರಟಿದ್ದೀರಿ ಸ್ವಾಮಿ? ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.